News Karnataka Kannada
Monday, May 06 2024
ಮೈಸೂರು

ಮೈಸೂರು ದಸರಾ ಸಂಭ್ರಮ: ಘಮಘಮಿಸುತ್ತಿರುವ ದಸರಾ ಆಹಾರ ಮೇಳಕ್ಕೆ ಬೋಜನ ಪ್ರಿಯರ ದೌಡು

Mysuru Dasara festivities: Devotees flock to Dasara Food Mela
Photo Credit : News Kannada

ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಆಯೋಜಿಸಲಾಗಿರುವ ಆಹಾರ ಮೇಳವು ಬೋಜನ ಪ್ರಿಯರನ್ನು ತನ್ನತ್ತ ಆಕರ್ಷಿಸುತ್ತಿದ್ದು, ಬೆಳಗ್ಗಿನಿಂದ ರಾತ್ರಿವರೆಗೂ ಜನ ಭೇಟಿ ನೀಡಿ ತಮಗೆ ಬೇಕಾದ ತಿನಿಸುಗಳನ್ನು ಸೇವಿಸಿ ಖುಷಿಯಾಗಿ ಹೊರ ಬರುತ್ತಿದ್ದಾರೆ.

ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಬಗೆ ಬಗೆಯ ಖಾದ್ಯ ಘಮಘಮಿಸುತ್ತಿದ್ದು, ಸಸ್ಯಹಾರ ಮತ್ತು ಮಾಂಸಹಾರಿ ತಿನಿಸುಗಳು ಅನಾವರಣಗೊಂಡಿದ್ದು, ಆಹಾರ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ. ಮೈಸೂರು ಜಿಲ್ಲೆಯ ಬುಡಕಟ್ಟು ಹಾಗೂ ಹಾಡಿಯಲ್ಲಿ ವಾಸಿಸುವ ಜನರು ಈ ಬಾರಿಯೂ ಮಳಿಗೆ ತೆರೆದಿದ್ದು, ಬೊಂಬು ಬಿರಿಯಾನಿ ಹಾಗೂ ವಾಕಳಿ ಬೇರಿನ ಟೀ ವಿಶೇಷವಾಗಿದೆ. ತೆಂಗಿನ ಗರಿ ಮೂಲಕ ಚಪ್ಪರದಂತೆ ಮಳಿಗೆಯನ್ನು ಸಿಂಗರಿಸಲಾಗಿದೆ. ಅದೇ ರೀತಿ ಸೌದೆ ಒಲೆಯಲ್ಲಿ ಮಾಡಿರುವ ಬೊಂಬು ಬಿರಿಯಾನಿ ಆಹಾರ ಪ್ರಿಯರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ.

ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗಗಳ ತಿನಿಸುಗಳು ಗಮನಸೆಳೆಯುತ್ತಿದ್ದು, ಆಯಾಯ ಊರಿನವರು ತಮ್ಮೂರಿನ ತಿನಿಸುಗಳನ್ನು ಸವಿದು ಖುಷಿ ಪಡುತ್ತಿದ್ದಾರೆ. ಇನ್ನು ದಾವಣಗೆರೆ ಬೆಣ್ಣೆದೋಸೆ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ, ಮಲ್ಲಿಗೆ ಇಡ್ಲಿ, ಬಂಗಾರಪೇಟೆ ಚುರುಮುರಿ, ಮೇಲುಕೋಟೆ ಪುಳಿಯೋಗರೆ, ಮುಳಬಾಗಿಲು ತುಪ್ಪದ ದೋಸೆ, ಕರಾವಳಿಯ ಪತ್ರೊಡೆ, ನೀರುದೋಸೆ ಕೋಳಿಸಾರು, ಹೀಗೆ ನೂರಾರು ಬಗೆಯ ತಿನಿಸುಗಳು ಬೋಜನ ಪ್ರಿಯರ ಬಾಯಲ್ಲಿ ನೀರೂರಿಸುತ್ತಿದೆ.

ಇನ್ನು ಮಾಂಸಹಾರಿ ತಿನಿಸುಗಳಾಗ ದಮ್ಮು ಬಿರಿಯಾನಿ, ಮಡಿಕೆ ಬಿರಿಯಾನಿ, ಹೈದ್ರಾಬಾದ್, ಅಂಬೂರು, ಹೀಗೆ ವಿವಿಧ ಬಿರಿಯಾನಿಗಳು, ಸುಕ್ಕ, ಪ್ರೈ, ಮಸಾಲೆ, ನಾಟಿಕೋಳಿ ಸಾರು, ಮುದ್ದೆ ಹೀಗೆ ಹಲವು ಬಗೆಯ ತಿನಿಸುಗಳು ಗಮನಸೆಳೆಯುತ್ತಿವೆ. ಇದರ ಜತೆಗೆ ವಿವಿಧ ಬಗೆಯ ಮೀನಿನ ಖಾದ್ಯಗಳು ಮಾಂಸಹಾರಿಗಳನ್ನು ತನ್ನತ್ತ ಸೆಳೆಯುತ್ತಿದೆ. ಇಷ್ಟೇ ಅಲ್ಲದೆ, ವಿವಿಧ ರೀತಿಯ ಚಾಟ್ಸ್, ಐಸ್‌ಕ್ರೀಂ, ಕೇಕ್ ಮಳಿಗೆಗಳಿವೆ. ಜ್ಯೂಸ್, ಬೋಂಡಾ ಬಜ್ಜಿ ಪಾನಿಪುರಿ ಅಂಗಡಿಗಳು ಆಕರ್ಷಿಸುತ್ತಿವೆ.

ಬೊಂಬು ಬಿರಿಯಾನಿ, ಗೆಣಸು, ಜೇನುತುಪ್ಪ, ಬಿದಿರಕ್ಕಿ ಪಾಯಸ, ನಳ್ಳಿ ಸಾರು, ಕಾಡುಸೊಪ್ಪು, ಕರಳೇ ಪಲ್ಯ, ಮುದ್ದೆ ಉಪ್ಸಾರು, ರಾಗಿಮುದ್ದೆ, ಹುರಳಿಕಟ್ಟು ಸೇರಿದಂತೆ ಹೀಗೆ ವಿಭಿನ್ನ ಬಗೆಯ ಪದಾರ್ಥಗಳು ಗಮನಸೆಳೆಯುತ್ತಿವೆ. ಜತೆಗೆ ಬಾಯಲ್ಲಿ ನೀರೂರಿಸುತ್ತಿದೆ. ಬಂಬೂ ಬಿರಿಯಾನಿ ಹೆಚ್ಚಿನ ಗಮನಸೆಳೆಯುತ್ತಿದೆ. ಆದಿವಾಸಿಗಳು ಇದನ್ನು ತಯಾರು ಮಾಡುತ್ತಿದ್ದು ಜನ ಸರತಿ ಸಾಲಿನಲ್ಲಿ ನಿಂತು ಕಾದು ಸೇವಿಸುವುದು ಕಂಡು ಬರುತ್ತಿದೆ.

ಅಕ್ಕಿಯನ್ನು ಬೇಯಿಸಿಕೊಂಡ ಮಾಂಸ ಹಾಗೂ ಮಸಾಲೆಗಳೆಲ್ಲವನ್ನೂ ಕೊರೆದ ಬಿದಿರಿಗೆ ತುಂಬಿ ಅದನ್ನು ಮುಚ್ಚಿ ಗಾಳಿ ಹೋಗಲು ಚಿಕ್ಕ ರಂಧ್ರವನ್ನು ಬಿಡಲಾಗುತ್ತದೆ. ನಂತರ ಉರಿಯುವ ಬೆಂಕಿಯಲ್ಲಿ ಬೇಯಿಸಲಾಗುವುದು. ಸುಮಾರು ಅರ್ಧ ಗಂಟೆ ಬಳಿಯ ತೆಗೆದು ಬೊಂಬನ್ನು ಒಡೆದು ಅದರೊಳಗೆ ಇರುವ ಬಿರಿಯಾನಿಯನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನೀಡಲಾಗುತ್ತದೆ. ಒಟ್ಟಾರೆ ವಿಶೇಷ ತಿನಿಸುಗಳು ಬೋಜನಪ್ರಿಯರನ್ನು ಅತ್ತ ಕಡೆ ತೆರಳುವಂತೆ ಮಾಡಿದೆ. ಈ ಬಾರಿ ತಿನಿಸುಗಳ ಬೆಲೆ ಏರಿಕೆಯೂ ಹೆಚ್ಚಾಗಿರುವುದು ಕಂಡು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು