ಮೈಸೂರು: ಗ್ರಾಹಕರ ಕಾಯ್ದೆಯನ್ನು ಅರಿತು ಅದರ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ನೊಂದ ಗ್ರಾಹಕರು ನ್ಯಾಯ ಪಡೆಯುವಲ್ಲಿ ಪ್ರಮುಖ ಪಾತ್ರವನ್ನು ವಿದ್ಯಾರ್ಥಿಗಳು ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಕ್ತ ಗಂಗೋತ್ರಿ ಅರ್ಥಶಾಸ್ತ್ರ ಸಂಶೋಧನಾ ಮತ್ತು ಅಧ್ಯಯನ ವಿಭಾಗದ ಅಧ್ಯಕ್ಷರಾದ ಆರ್. ಹೆಚ್.ಪವಿತ್ರ ಅಭಿಪ್ರಾಯಪಟ್ಟರು.
ಅಖಿಲ ಭಾರತೀಯ ಗ್ರಾಹಕ ಪಂಚಾಯಿತಿ, ಮೈಸೂರು ಘಟಕ ವತಿಯಿಂದ ಗ್ರಾಹಕ ಜಾಗರಣ ಪಾಕ್ಷಿಕ 2022ರ ಅಂಗವಾಗಿ ವಿದ್ಯಾರಣ್ಯಪುರಂನಲ್ಲಿರುವ ವಿದ್ಯಾರಣ್ಯ ಕೋಚಿಂಗ್ ಸೆಂಟರ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳು ಹಾಗೂ ಗ್ರಾಹಕರಿಗೆ ಗ್ರಾಹಕ ಹಕ್ಕುಗಳ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಗ್ರಾಹಕರ ಹಕ್ಕುಗಳ ಕುರಿತು ವಿಶೇಷವಾದ ಜ್ಞಾನ ಹೊಂದಲು ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ಅವರನ್ನು ಸುಶಿಕ್ಷಿತರನ್ನಾಗಿಸಬೇಕಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ಮುತುವರ್ಜಿ ವಹಿಸಬೇಕು. ವಸ್ತು, ಸೇವೆಗಳ ಖರೀದಿಗೂ ಮುನ್ನ ಅದರಲ್ಲಿನ ನಿಬಂಧನೆ, ಷರತ್ತುಗಳನ್ನು ಓದುವ ತಾಳ್ಮೆಯೂ ನಮ್ಮಲ್ಲಿ ಇಲ್ಲದಂತಾಗಿದೆ. ಹಾಗಾಗಿ ಗ್ರಾಹಕರ ಶೋಷಣೆ ದ್ವಿಗುಣಗೊಳ್ಳುತ್ತಲೇ ಇದೆ. ವಂಚಿಸುವ ಸಂಸ್ಥೆಗಳನ್ನು ಶಿಕ್ಷಿಸಲು ಕಠಿಣ ಕಾನೂನಿನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಹಕರ ಹಕ್ಕುಗಳು ಮತ್ತು ಗ್ರಾಹಕರ ಹಿತರಕ್ಷಣೆಯ ಕುರಿತು ಮಾಹಿತಿ ನೀಡಿದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಡಾ . ಜಿ.ವಿ ರವಿಶಂಕರ್ ಮುಂದಿನ ದಿನಗಳಲ್ಲಿ ಪ್ರತಿ ಶಾಲಾ-ಕಾಲೇಜಿನಲ್ಲಿ ಗ್ರಾಹಕರ ಕ್ಲಬ್ ಸ್ಥಾಪಿಸಿ ಅದರ ಮೂಲಕ ಮಕ್ಕಳಿಗೆ ವಸ್ತುಗಳ ತೂಕ, ಅಳತೆಯಲ್ಲಿ ಮೋಸ ಹೋಗದಂತೆ ಸರಕನ್ನು ಯಾವ ರೀತಿ ಕೊಳ್ಳಬೇಕು. ವಸ್ತುಗಳನ್ನು ಖರೀದಿಸಿದ ನಂತರ ರಶೀದಿ ಪಡೆಯಬೇಕು. ಕೊಂಡ ವಸ್ತುಗಳು ಕಳಪೆ ಗುಣಮಟ್ಟ ಹಾಗೂ ದೋಷ ಪೂರ್ಣವೆಂದು ಕಂಡು ಬಂದಾಗ ಕೂಡಲೇ ಗ್ರಾಹಕ ಮಾಹಿತಿ ಕೇಂದ್ರಕ್ಕೆ ದೂರು ನೀಡುವ ಬಗ್ಗೆ ಹಾಗೂ ಗ್ರಾಹಕ ಸಂರಕ್ಷಣಾ ಕಾಯಿದೆ ಕುರಿತು ಅರಿವು ಮೂಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಖಿಲ ಭಾರತೀಯ ಗ್ರಾಹಕ ಪಂಚಾಯತಿಯ ಹಿರಿಯ ಸದಸ್ಯರಾದ ರಂಗನಾಥ್, ಕಾರ್ಯದರ್ಶಿ ರವಿಶಂಕರ್, ಚಕ್ರಪಾಣಿ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ಇನ್ನಿತರರು ಇದ್ದರು.