ಮೈಸೂರು: ಸ್ವಚ್ಛ ಸರ್ವೇಕ್ಷಣ್-2022ರ ಅಂಗವಾಗಿ ಕೇಂದ್ರ ನಗರಾಭಿವೃದ್ಧಿ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಮೈಸೂರು ಈ ಬಾರಿಯೂ ಪ್ರಶಸ್ತಿ ಪಡೆದಿದೆ.
10ಲಕ್ಷ ಜನಸಂಖ್ಯೆ ಒಳಗಿನ ಮಹಾ ನಗರಗಳ ಸ್ಪರ್ಧೆಯಲ್ಲಿ ಶಿವಮೊಗ್ಗ, ಮೈಸೂರು ಸೇರಿದಂತೆ 4 ಸಾವಿರಕ್ಕೂ ಹೆಚ್ಚು ನಗರಗಳು ಭಾಗಿಯಾಗಿದ್ದವು. ಕಳೆದ ವರ್ಷ ಮೈಸೂರಿಗೆ 5 ಸ್ಟಾರ್ ರಾಕಿಂಗ್ ಪಟ್ಟ ಸಿಕ್ಕಿತ್ತು. ಮೇಯರ್ ಶಿವಕುಮಾರ್, ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಆರೋಗ್ಯ ಅಧಿಕಾರಿ ಡಾ.ನಾಗರಾಜ್ ಅಕ್ಟೋಬರ್ ಒಂದರಂದು ದೆಹಲಿಗೆ ತೆರಳಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಪ್ರತೀ ವರ್ಷ ಅಕ್ಟೋಬರ್ ಒಂದರ ಗಾಂಧೀ ಜಯಂತಿ ದಿನ ರಾಷ್ಟ್ರಪತಿಯವರು ಪ್ರಶಸ್ತಿ ವಿಜೇತ ನಗರಗಳಿಗೆ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಇಂದೋರ್ ನಗರ ಸತತ 5 ವರ್ಷಗಳಿಂದ ಸ್ವಚ್ಛ ನಗರಿ ಪಟ್ಟವನ್ನು ಅಲಂಕರಿಸುತ್ತಾ ಬಂದಿದೆ. ಕಳೆದ ವರ್ಷ ಸೂರತ್ ಮತ್ತು ವಿಜಯವಾಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದ್ದವು.
ಸ್ವಚ್ಛ ಭಾರತ ಅಭಿಯಾನದ ನೋಡಲ್ ಏಜೆನ್ಸಿಯಾಗಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ 2016ರಲ್ಲಿ 73 ನಗರಗಳಲ್ಲಿ ತನ್ನ ಮೊದಲ ಸಮೀಕ್ಷೆ ನಡೆಸಿತ್ತು. ನಂತರದ ವರ್ಷ 434 ನಗರಗಳಲ್ಲಿ ಸಮೀಕ್ಷೆ ನಡೆಸಿತ್ತು. 2018ರ ಸಮೀಕ್ಷೆಯಲ್ಲಿ 4203 ನಗರಗಳು, 2019ರಲ್ಲಿ 4237 ಮತ್ತು 2021ರಲ್ಲಿ 4230 ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.