ಮೈಸೂರು: ರಂಗವಲ್ಲಿ ಮೈಸೂರು ತಂಡವು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಸಹಯೋಗದಲ್ಲಿ ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ಸೆ.3 ಶನಿವಾರ ಮತ್ತು ಸೆ.4ರ ಭಾನುವಾರದಂದು ಸಂಜೆ 7 ಗಂಟೆಗೆ ನವೋದಯ ರೆಪರ್ಟರಿ ತಂಡವು `ಒಳಶುಂಠಿ’ ಎಂಬ ನಗೆನಾಟಕವನ್ನು ಆಯೋಜಿಸಿದೆ.
ಹಿರಿಯ ರಂಗನಿರ್ದೇಶಕ ಪ್ರಸನ್ನ ಅವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು, ಸಂಪೂರ್ಣ ಹಾಸ್ಯಮಯವಾಗಿರುವ ಈ ನಾಟಕಕ್ಕೆ ಅನುಷ್ ಶೆಟ್ಟಿ ಸಂಗೀತ ನೀಡಿದ್ದು, ಮುನ್ನ ಮತ್ತು ಕೃಷ್ಣ ಚೈತನ್ಯ ಸಾಂಗತ್ಯ ನೀಡಿದ್ದಾರೆ. ಬೆಳಕಿನ ವಿನ್ಯಾಸ ಮಧುಮಳವಳ್ಳಿ, ಪ್ರಸಾದನ ಮಂಜು ಕಾಚಕ್ಕಿ ಅವರದು. ಪ್ರತಿ ದಿನ ಸಂಜೆ 7 ಗಂಟಗೆ ಪ್ರಾರಂಭವಾಗಲಿರುವ ನಾಟಕ ಪ್ರದರ್ಶನಕ್ಕೆ ರೂ.50 ಪ್ರವೇಶ ದರ ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ 9590259095/ 9964656482 ಸಂಪರ್ಕಿಸುವಂತೆ ಕೋರಲಾಗಿದೆ.
ನಾಟಕ ಕುರಿತು ಹೇಳಬೇಕೆಂದರೆ, ಪ್ಲಾಸ್ಟಿಕ್ ಹಾಗೂ ಸಿಂಥೆಟಿಕ್ ಬಾವುಟವನ್ನು ಬಳಸುತ್ತಿರುವುದರಿಂದ ಭಾರತಮಾತೆ ತನ್ನ ಮಾಂತ್ರಿಕತೆಯನ್ನು ಕಳೆದುಕೊಂಡಿರುತ್ತಾಳೆ. ಭಾರತಾಂಬೆಯ ಮಕ್ಕಳಾದ ಕೇಸರಿ ಬಿಳಿ ಹಸಿರು ಪರಸ್ಪರ ಜಗಳವಾಡುತ್ತ ದೇಶವನ್ನು ಅಧೋಗತಿಗೆ ತಂದಿರುತ್ತಾರೆ. ಈ ನಡುವೆ ಹೂ ಮಾರುವ ಬಡ ಮುದುಕಿಯೊಬ್ಬಳು ಭಾರತಮಾತೆಯ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನೋಡಿ ಭಾರತಮಾತೆಗೆ ಬೆಂಬಲವಾಗಿ ನಿಲ್ಲುತ್ತಾಳೆ. ಭರತಖಂಡದಲ್ಲಿ ನಡೆದಿರುವ ದುರಂತವನ್ನು ಸ್ವರ್ಗದಿಂದಲೇ ನೋಡಿ ದುಃಖಿತರಾಗಿದ್ದ ಗಾಂಧಿ, ಅಂಬೇಡ್ಕರರು, ಭಾರತದಲ್ಲಿ ನಡೆದಿರುವ ದುರಂತವನ್ನು ತಡೆಯುವಂತೆ ನಾರದರಲ್ಲಿ ಮನವಿ ಮಾಡಿಕೊಳ್ಳುತ್ತಾರೆ.
ಮುಖ್ಯ ಪಾತ್ರದಲ್ಲಿ ಗೀತಾ ಪಡುವಾರಳ್ಳಿ, ರಾಜಲಕ್ಷ್ಮಿ, ಚಂದನ್ ಆಚಾರ್, ರವಿಪ್ರಸಾದ್, ಭೂಮಿ, ಅಪೂರ್ವ ನಾಗರಾಜ್ ಅಭಿನಯಿಸಿದ್ದಾರೆ.