ಬೆಂಗಳೂರು: ರಾಜ್ಯದಾದ್ಯಂತ ಆಯ್ದ 150 ಐಟಿಐಗಳನ್ನು ಅತ್ಯಂತ ಸುಸ್ಸಜ್ಜಿತವಾಗಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಹೊಸ ಕೋರ್ಸ್ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಜೊತೆಗೆ ಐಟಿಐಗಳಲ್ಲಿರುವ ತಂತ್ರಜ್ಞಾನದ ಸದ್ಬಳಕೆ ಖಾತರಿಪಡಿಸುವಿಕೆ ಹೊಣೆ ಐಟಿಐಗಳ ಪ್ರಾಂಶುಪಾಲರಗಳದ್ದು ಎಂದು ಜೀವನೋಪಾಯ ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಸೆಲ್ವ ಕುಮಾರ್ ಹೇಳಿದರು.
ಐಟಿಐ ಪ್ರಾಂಶುಪಾಲರಿಗೆ ಕೌಶಲ್ಯಭವನದಲ್ಲಿ ಆಯೋಜಿಸಲಾಗಿದ್ದ ‘ಉದ್ಯೋಗ’ ಯೋಜನೆಯಡಿ ಒಂದು ದಿನದ ಕಾರ್ಯಾಗಾರದಲ್ಲಿ ಇಲಾಖೆಯ ಸುದ್ದಿಪತ್ರವನ್ನು (ನ್ಯೂಸ್ ಲೆಟರ್) ಬಿಡುಗಡೆಗೊಳಿಸಿ ಮಾತನಾಡಿ, ಯುವಶಕ್ತಿಯ ಸಬಲೀಕರಣವನ್ನು ಗಮನದಲ್ಲಿರಿಸಿ ಅತ್ಯಂತ ಹೆಚ್ಚಿನ ನಿರೀಕ್ಷೆಗಳೊಂದಿಗೆ ಆರಂಭಿಸಲಾದ ಸರ್ಕಾರದ ಐಟಿಐ ಉನ್ನತೀಕರಣ ಹಾಗೂ ಹೊಸ ಶಾರ್ಟ್ ಟರ್ಮ್ ಕೋರ್ಸ್ಗಳನ್ನು ಯಶಸ್ವಿಯಾಗಿಸಬೇಕಿದೆ.
ಈಗಾಗಲೇ ಉದ್ಯೋಗ ಯೋಜನೆಯಡಿ ಅಲ್ಪಾವಧಿ ಕೋರ್ಸಿನ ಪ್ರಥಮ ತಂಡದ ವಿದ್ಯಾರ್ಥಿಗಳು ಹೊರಬಂದಿದ್ದಾರೆ.
ಧಾರವಾಡ ಮತ್ತು ಪುಣೆಯ ಟಾಟಾ ಇಂಡಸ್ಟ್ರಿಸ್ ತರಬೇತಿ ಸಂಸ್ಥೆಯಲ್ಲಿ ಒಟ್ಟು 5,700 ಐಟಿಐ ತರಬೇತಿ ಪಡೆದ ವಿದ್ಯಾರ್ಥಿಗಳನ್ನು ಉದ್ಯೋಗ ತರಬೇತಿ ಸ್ಟೈಫಂಡ್ ಜೊತೆ ನೀಡಲು ಟಾಟಾ ಕೈಗಾರಿಕಾ ಸಂಸ್ಥೆ ಸಿದ್ದವಾಗಿದೆ. ಉನ್ನತೀಕರಿಸಿದ ಐಟಿಐ ಟೆಕ್ ಲ್ಯಾಬ್ಗಳಲ್ಲಿರುವ ಇರುವ ಸಾಫ್ಟ್ ವೇರ್ಗಳನ್ನು ಇಂಜಿನಿಯರ್ ವಿದ್ಯಾರ್ಥಿಗಳು ಅಲ್ಪಾವಧಿ ಕೋರ್ಸ್ಗಳಲ್ಲಿ ಸೇರಿ ಕಲಿತಲ್ಲಿ ಅವರಿಗೆ ತಲಾ 20ಸಾವಿರ ರೂ.ಗಳ ಶುಲ್ಕ ಭರಿಸಲು ವಿಟಿಯು ತೀರ್ಮಾನಿಸಿದ್ದು, ಈ ಬಗ್ಗೆ ಪ್ರಾಂಶುಪಾಲರು ಸಂಬಂಧಪಟ್ಟ ಇಂಜಿನಿಯರಿಂಗ್ ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದಾಗಿದ್ದು, ಇಂತಹ ಹಲವಾರು ಹೊಸ ಅವಕಾಶಗಳನ್ನು ಸೃಷ್ಟಿಸಲು ಇಲಾಖೆ ಕಾರ್ಯೋನ್ಮುಖವಾಗಿದೆ. ಪ್ರಾಂಶುಪಾಲರುಗಳು ತಮ್ಮ ಹೊಣೆಯರಿತು ಇನ್ನಷ್ಟು ವೇಗವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಹಲವು ಸವಾಲುಗಳು ಬರುತ್ತವೆ. ಎಲ್ಲ ಸವಾಲುಗಳನ್ನು ಸಕಾರಾತ್ಮಕವಾಗಿ ಎದುರಿಸಿ ಸಾಧನೆ ಮಾಡುವ ಚೈತನ್ಯವನ್ನು ಕಾರ್ಯಾಗಾರಗಳು ನೀಡುತ್ತವೆ.
ಸಾಂಪ್ರದಾಯಿಕ ತರಬೇತಿಗಳ ಜೊತೆಗೆ ಅಲ್ಪಾವಧಿ ಕೈಗಾರಿಕ ತರಬೇತಿಗಳನ್ನು ಪಡೆದು ಅದರೊಂದಿಗೆ ಡಿಗ್ರಿ ಪಡೆಯಲು ಅನುಕೂಲವಾಗುವಂತೆ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಯೋಜನೆಗಳನ್ನು ರೂಪಿಸಲಾಗಿದೆ. ಈ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಲು ಐಟಿಐ ಪಾಲಿಟೆಕ್ನಿಕ್ ಗಳು ಹಾಗೂ ಪ್ರಾಂಶುಪಾಲರುಗಳು ಸಜ್ಜಾಗಬೇಕೆಂದು ಪ್ರಧಾನ ಕಾರ್ಯದರ್ಶಿಗಳು ಹೇಳಿದರು.
ಕಾರ್ಯಾಗಾರದಲ್ಲಿ ಇಲಾಖೆಯ ಆಯುಕ್ತರಾದ ಕೆ. ಜ್ಯೋತಿ, ನಿರ್ದೇಶಕರಾದ ಯೋಗೇಶ್ವರ್, ಉಪನಿರ್ದೇಶಕರಾದ ಹಾಲಪ್ಪ ಶೆಟ್ಟಿ, ಟಾಟಾ ಟೆಕ್ನಾಲಜೀಸ್ನ ಪುಷ್ಕರ್ ಕವಲ್ ಗುಂದ್, ವಕೀಲರಾದ ಅಜಿತ್ ಅಚ್ಚಪ್ಪ ಅವರಿದ್ದರು. 150 ಕಾಲೇಜುಗಳ ಪ್ರಾಂಶುಪಾಲರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.