ಮೈಸೂರು: ರಾಜ್ಯಕ್ಕೆ ಮುಂಗಾರು ಆಗಮದ ನಿರೀಕ್ಷೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಯಾವುದೇ ಹಾನಿಯಾಗದಂತೆ ಮೈಸೂರು ಮಹಾನಗರ ನಗರ ಪಾಲಿಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಮಾನ್ಸೂನ್ ಮಾರುತದಿಂದ ಎದುರಾಗಬಹುದಾಗ ಸಮಸ್ಯೆಗಳನ್ನು ನಿಭಾಯಿಸಲು ಸಿದ್ಧತೆ ಮಾಡಿಕೊಂಡಿರುವ ಪಾಲಿಕೆ ಇದಕ್ಕಾಗಿ 9ತಂಡಗಳನ್ನು ನಿಯೋಜನೆ ಮಾಡಿದೆ. ಪ್ರತಿ ವರ್ಷ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುವುದು, ಒಳಚರಂಡಿಗಳ ಅಸಮರ್ಪಕ ನಿರ್ವಹಣೆಯಿಂದ ರಸ್ತೆಯಲ್ಲಿ ನೀರು ನಿಲ್ಲುವುದು ಸೇರಿದಂತೆ ಹಲವಾರು ಸಮಸ್ಯೆಗಳು ನಿಭಾಯಿಸುವ ನಿಟ್ಟಿನಲ್ಲಿ ಪಾಲಿಕೆ ಸಮರ್ಪಕವಾಗಿ ತನ್ನ ಕಾರ್ಯನಿರ್ವಹಿಸುವುದಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಇದರಿಂದ ಎಚ್ಚೆತ್ತುಕೊಂಡಿರುವ ಪಾಲಿಕೆ ಮಳೆಯಿಂದಾಗುವ ಅವಘಡಗಳನ್ನು ನಿಭಾಯಿಸಲು ಮುಂದಾಗಿದೆ.
ಈ ಸಂಬಂಧ ನಗರ ಪಾಲಿಕೆಯ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಮುಂಗಾರು ಆಗಮನ ಜೋರಾಗುವ ಸಾಧತೆ ಹೆಚ್ಚಿರುವುದರಿಂದ ನಗರದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಲು ಪಾಲಿಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅದಕ್ಕಾಗಿ ಅಗತ್ಯ ಸಿಬ್ಬಂದಿಗಳು, ಯಂತ್ರೋಪಕರಣಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ನಗರ ಪಾಲಿಕೆ 9 ವಲಯಗಳ ಮೇಲೆ ನಿಗಾವಹಿಸಲಾಗಿದ್ದು, ಅದಕ್ಕಾಗಿ 9 ತಂಡಗಳನ್ನು ರಚನೆ ಮಾಡಲಾಗಿದೆ. ಈ ಎಲ್ಲಾ ತಂಡಗಳಿಗೂ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಪಾಲಿಕೆಯ ನಿರ್ದೇಶನದಂತೆ ಈ ತಂಡಗಳು ತಮ್ಮ ಕಾರ್ಯ ನಿರ್ವಹಿಸಲಿವೆ. ಇನ್ನು ಮಳೆ ಸಂದರ್ಭದಲ್ಲಿ ಮರಗಳು ಬೀಳುವುದು, ರಸ್ತೆ, ಚರಂಡಿಗಳಲ್ಲಿ ನೀರು ನಿಲ್ಲವುದು ಇಂತಹ ಸಮಸ್ಯೆಗಳನ್ನು ನಿಭಾಯಿಸಲೆಂದು 4 ಅಭಯ ತಂಡಗಳನ್ನೂ ನಿಯೋಜನೆ ಮಾಡಲಾಗಿದೆ ಎಂದರು.