ಮೈಸೂರು: ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಐದನೇ ಘಟಿಕೋತ್ಸವವನ್ನು ಮಾ.20ರಂದು ಸಂಜೆ 4 ಗಂಟೆಗೆ ವಿವಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ಡಾ.ಎಂ.ಎನ್.ಸಂತೋಷ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯದ ಕುಲಾಧಿಪತಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಪದಕಗಳನ್ನು ಪ್ರದಾನ ಮಾಡಲಿದ್ದಾರೆ. ಇಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಅವರು ಘಟಿಕೋತ್ಸವ ಭಾಷಣ ಮಾಡುವರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ ಬೆಟಸೂರ ಮಠ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ ಎಂದು ತಿಳಿಸಿದರು.
ಐದನೆಯ ಘಟಿಕೋತ್ಸವದಲ್ಲಿ 986 ಬಿಇ, 54 ಬಿಸಿಎ, 176 ಎಂಟೆಕ್, 103 ಎಂಸಿಎ, 47ಎಂಎಸ್ಸಿ 227 ಎಂಬಿಎ ಮತ್ತು 11 ಸಂಶೋಧನಾ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. 56 ವಿದ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಲಾಗುತ್ತಿದ್ದು, ಇದರಲ್ಲಿ 34 ಪದಕಗಳನ್ನು ತಮ್ಮ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು, 22 ದತ್ತಿ ಪದಕಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ವಿಶ್ವವಿದ್ಯಾನಿಲಯದಲ್ಲಿ 11 ಪದವಿ, 31 ಸ್ನಾತಕೋತ್ತರ ಹಾಗೂ ಎಲ್ಲಾ ವಿಭಾಗಗಳಲ್ಲೂ ಡಾಕ್ಟರಲ್ ಪದವಿಯ ಕೋರ್ಸುಗಳನ್ನು ನಡೆಸಲಾಗುತ್ತಿದೆ. ಸುಮಾರು 6ಸಾವಿರ ವಿದ್ಯಾರ್ಥಿಗಳು ವಿವಿಧ ಕೋರ್ಸ್ ಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವ ಶೇ.90 ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತಿದೆ. ವಾರ್ಷಿಕ ಸರಾಸರಿ 12ಲಕ್ಷ, ಗರಿಷ್ಠ 25ಲಕ್ಷ ವೇತನ ಪಡೆಯುತ್ತಿದ್ದಾರೆ. 228 ಕಂಪನಿಗಳು ಕ್ಯಾಂಪಸ್ಗೆ ಭೇಟಿ ನೀಡಿದ್ದು, 65ಕಂಪನಿಗಳು ಭೇಟಿ ನೀಡಲಿವೆ. ದೇಶ, ವಿದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ. ಜತೆಗೆ ಆನ್ಲೈನ್ ಶಿಕ್ಷಣಕ್ಕೂ ಉತ್ತಮ ಸ್ಪಂದನೆ ಇರುವುದಾಗಿ ತಿಳಿಸಿದರು.
ಡಸಾಲ್ಟ್ ಸಿಸ್ಟಂ, ಟಾಟಾ ಕನ್ಸಲ್ಟೆನ್ಸಿ, ಟಿಸಿಎಸ್ ಸೇರಿದಂತೆ ಮಲೇಶಿಯಾ, ಜಪಾನ್, ರಷ್ಯಾ ದೇಶಗಳ ಪರಿಷ್ಠಿತ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ಸಹಯೋಗದಲ್ಲಿ ಇಂಟರ್ನ್ಶಿಪ್ ಕೊಡುತ್ತಿದ್ದೇವೆ. ಇಂಟರ್ನ್ಶಿಪ್ ಬ್ಯಾಂಕ್ ಕೂಡ ಮಾಡಿಕೊಂಡಿದ್ದೇವೆ. ವಿವಿಧ ಕಂಪನಿಗಳ ಸಂಪರ್ಕದಲ್ಲಿದ್ದೇವೆ ಎಂದರು.
ಕುಲಸಚಿವ ಪ್ರೊ.ಎಸ್.ಎ.ಧನರಾಜ್ ಮಾತನಾಡಿ, ವಿಶ್ವವಿದ್ಯಾಲಯವನ್ನು ಸುಸ್ಥಿರ ವಿಶ್ವವಿದ್ಯಾಲಯನ್ನಾಗಿ ಮಾಡುವುದು ನಮ್ಮ ಯೋಜನೆಯಾಗಿದೆ. ಸಂಪೂರ್ಣವಾಗಿ ಹಸಿರು ಕ್ಯಾಂಪಸ್ ಮಾಡಲಾಗುತ್ತಿದೆ. ಮರುಬಳಕೆ ಮತ್ತು ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಶೈಕ್ಷಣಿಕ, ಆಡಳಿತ ಕಟ್ಟಡ, ಸಭಾಂಗಣಗಳು ಮೊದಲಾದ ನಿರ್ಮಾಣ ಯೋಜನೆಗಳನ್ನು ಈ ವರ್ಷ ಹೊಂದಲಾಗಿದೆ ಎಂದು ತಿಳಿಸಿದರು.