ಮೈಸೂರು: ಭಾರತೀಯತೆ ಪರಿಕಲ್ಪನೆಯಡಿ ಆಯೋಜಿಸಿದ್ದ ಎಂಟು ದಿನಗಳ ಕಾಲ ನಡೆದ ಬಹುರೂಪಿ ನಾಟಕೋತ್ಸವ ಯಾವುದೇ ಅಡೆ ತಡೆಗಳಿಲ್ಲದೆ ಮುಕ್ತಾಯಗೊಳ್ಳುವುದರೊಂದಿಗೆ ಅಭೂತಪೂರ್ವ ಯಶಸ್ಸು ಕಂಡಿದ್ದು ಆ ಮೂಲಕ ಭಾರತೀಯತೆಯನ್ನು ಎಲ್ಲೆಡೆ ಪಸರಿಸುವಲ್ಲಿ ಯಶಸ್ಸು ಕಂಡಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಭಾರತೀಯತೆ ಪರಿಕಲ್ಪನೆ ಅಡಿಯಲ್ಲಿ ನಡೆದ ವಿವಿಧ ಭಾಷೆಯ ನಾಟಕ, ಚಲನಚಿತ್ರೋತ್ಸವ, ಜನಪದೋತ್ಸವ, ಕರಕುಶಲ ವಸ್ತುಪ್ರದರ್ಶನ, ಪುಸ್ತಕ ಪ್ರದರ್ಶನ, ವಿಚಾರಸಂಕಿರಣ, ಭಾಷಣ ಸ್ಪರ್ಧೆ-ಹೀಗೆ ಎಲ್ಲ ಚಟುವಟಿಕೆಗಳೂ ಯಶಸ್ವಿಯಾಗಿವೆ. ಉತ್ಸವ ಉದ್ಘಾಟನೆಯಾಗುವವರೆಗೂ ಮಳೆಯಾಗುತ್ತದೆ ಎಂದು ತಿಳಿದಿರಲಿಲ್ಲ. ಮಳೆ ಬರುವುದು ಗೊತ್ತಿದ್ದರೆ ಮಳಿಗೆಗಳಿಗೆ ಬೇರೆ ವ್ಯವಸ್ಥೆ ಮಾಡುತ್ತಿದ್ದೆವು. ಮಳೆಯಿಂದಾಗಿ ಎರಡು ಮಳಿಗೆಯವರು ಮಧ್ಯದಲ್ಲಿಯೇ ಹೋದರು. ಅವರ ಜಾಗಕ್ಕೆ ಹೊಸದಾಗಿ ನಾಲ್ಕು ಜನ ಬಂದರು. ಮಳೆ ನೀರು ಬೀಳದಂತೆ ಎಲ್ಲ ಮಳಿಗೆಗಳಿಗೆ ಟಾರ್ಪಲ್ ಕಟ್ಟಿಕೊಟ್ಟಿದ್ದೆವು. ಪುಸ್ತಕ ಸೇರಿದಂತೆ ಎಲ್ಲ ಮಳಿಗೆಗಳಿಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಒಳ್ಳೆಯ ವ್ಯಾಪಾರವೂ ಆಗಿದೆ. ಆಹಾರ ಮೇಳದ ಬಗ್ಗೆ ಸಾರ್ವಜನಿಕರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಕೊರೊನಾ ಕಾರಣದಿಂದ 2021ನೇ ಸಾಲಿನ ಬಹುರೂಪಿ ಉತ್ಸವವನ್ನು ಈ ವರ್ಷದ ಮಾರ್ಚ್ನಲ್ಲಿ ಆಯೋಜಿಸಲಾಗಿತ್ತು. ಆದ್ದರಿಂದ ವರ್ಷಾಂತ್ಯದಲ್ಲಿ 2022ನೇ ಸಾಲಿನ ಬಹುರೂಪಿ ಉತ್ಸವ ನಡೆದಿದೆ. ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ ಹಾಗೂ ಸಮಯದ ಅಭಾವದ ನಡುವೆಯೂ ರಂಗಾಯಣದ ಕಲಾವಿದರು, ಭಾರತೀಯ ರಂಗ ವಿದ್ಯಾಲಯದ ವಿದ್ಯಾರ್ಥಿಗಳು ಎಲ್ಲರೂ ಯುದ್ಧೋಪಾದಿಯಲ್ಲಿ ಕೆಲಸ ಮಾಡುವ ಮೂಲಕ ಬಹುರೂಪಿ ಉತ್ಸವವನ್ನು ಯಶಸ್ವಿಗೊಳಿಸಿದ್ದಾರೆ.
ಎಂಟು ದಿನಗಳ ಕಾಲ ನಡೆದ ರಂಗೋತ್ಸವದಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚಿನ ಕಲಾವಿದರು ತಮ್ಮ ಕಲಾ ಶ್ರೀಮಂತಿಕೆ ಪ್ರದರ್ಶಿಸಿದರು. ಸಾವಿರಾರು ಪ್ರೇಕ್ಷಕರು ಬಹುರೂಪಿ ಸಂಭ್ರಮದಲ್ಲಿ ಭಾಗಿಯಾದರು. ಈ ಬಾರಿ ಬಹುರೂಪಿ ಉತ್ಸವದಲ್ಲಿ ರಂಗಾಯಣಕ್ಕೆ 3.5 ಲಕ್ಷ ರೂ. ಆದಾಯ ದೊರಕಿದೆ. ಬಹುರೂಪಿಯ ಎಲ್ಲ ನಾಟಕಗಳನ್ನು 4 ಸಾವಿರ ಜನ ನೋಡಿದ್ದಾರೆ. ಉತ್ಸವದಲ್ಲಿ ಸಾಂಸ್ಕೃತಿಕ ನಗರಿಯ ಜನ, ರಂಗಪ್ರಿಯರು ಬಹುಭಾಷಾ ನಾಟಕಗಳಿಗೆ ಮಾರುಹೋಗಿದ್ದಾರೆ. ಕಲಾಮಂದಿರದಲ್ಲಿ ನಡೆದ ತೆಲುಗಿನ ಮಾಯಾಬಜಾರ್, ಬೆಂಗಳೂರಿನ ಬೆನಕ ತಂಡದ ವಿದ್ಯಾ ಸುಂದರಿ ಬೆಂಗಳೂರು ನಾಗರತ್ನಮ್ಮ ನಾಟಕ ಹೌಸ್ ಫುಲ್ ಆಗಿದ್ದವು. ಭೂಮಿಗೀತ ಹಾಗೂ ಸಂಪತ್ ರಂಗಮಂದಿರದಲ್ಲಿ ನಡೆದ ಬಹುತೇಕ ಎಲ್ಲ ನಾಟಕಗಳ ಟಿಕೆಟ್ ಖಾಲಿಯಾಗಿದ್ದವು. ಈ ವರ್ಷ 12 ಕನ್ನಡದ ನಾಟಕಗಳು ಮತ್ತು ತುಳು ನಾಟಕ ಸೇರಿ ಒಟ್ಟು 20ನಾಟಕಗಳು ಪ್ರದರ್ಶನಗೊಂಡವು. ಕಳೆದ ಬಾರಿಯ ಉತ್ಸವದಲ್ಲಿ 36 ನಾಟಕ ಪ್ರದರ್ಶನ ನಡೆದಿದ್ದು, ಟಿಕೆಟ್ ಮಾರಾಟದಲ್ಲಿ 7 ಲಕ್ಷ ರೂ. ಸಂಗ್ರಹವಾಗಿತ್ತು ಎಂದರು.
ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಬಹುರೂಪಿ ಸಂಚಾಲಕ ಜಗದೀಶ್ ಮನವಾರ್ತೆ ಇತರರಿದ್ದರು.