ಮೈಸೂರು: ಎಚ್.ಡಿ.ಕೋಟೆ ತಾಲೂಕಿನ ಹಾಲಾಳು ಗ್ರಾಮದಲ್ಲಿ ಐದು ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಭವ್ಯ ಸ್ಮಾರಕ ಲೋಕಾರ್ಪಣೆಗೊಳ್ಳುವ ಕಾಲ 13 ವರ್ಷಗಳ ಬಳಿಕ ಸನ್ನಿಹಿತವಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಭಾರತಿ ವಿಷ್ಣುವರ್ಧನ್ ಅವರ ನವೀಕೃತ ಮನೆಯ ಗೃಹಪ್ರವೇಶಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಷ್ಣು ಸ್ಮಾರಕವನ್ನು ಶೀಘ್ರವೇ ಲೋಕಾರ್ಪಣೆಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಡಿ.18ರಂದು ಸ್ಮಾರಕವನ್ನು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.
2009ರ ಡಿ.30ರಂದು ಮೈಸೂರಿನಲ್ಲಿ ದಿಢೀರ್ ಆಗಿ ಮೃತಪಟ್ಟಿದ್ದರು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಅಂತ್ಯಸಂಸ್ಕಾರ ನಡೆದರೂ ನಾನಾ ಕಾರಣಗಳಿಂದಾಗಿ ಅಲ್ಲಿ ಸ್ಮಾರಕ ನಿರ್ಮಿಸುವ ಕೆಲಸ ಕೈಗೂಡಲಿಲ್ಲ. ಆ ನಂತರ 2016ರಲ್ಲಿ ಭಾರತಿ ಅವರ ಮನವಿಗೆ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಚ್.ಡಿ.ಕೋಟೆ ತಾಲೂಕಿನ ಹಾಲಾಳು ಗ್ರಾಮದಲ್ಲಿ ಐದು ಎಕರೆ ಜಮೀನು ಮಂಜೂರು ಮಾಡಿದರು. ಮೈಸೂರು ಜಿಲ್ಲಾಡಳಿತ ಭೂ ಮಂಜೂರಾತಿಯನ್ನು ಅಂತಿಮಗೊಳಿಸಿತು. 2019 ರಲ್ಲಿ ಯಡಿಯೂರಪ್ಪ ಸರಕಾರ ಡಾ.ವಿಷ್ಣುವರ್ಧನ್ ಪ್ರತಿಷ್ಠಾನಕ್ಕೆ 11 ಕೋಟಿ ರೂ. ಅನುದಾನ ಬಿಡುಗಡೆಗೊಳಿಸುವ ಕಾಮಗಾರಿಗೆ ಚಾಲನೆ ನೀಡಿತು.
ದಿಲ್ಲಿಯ ರಾಜಪಥದಲ್ಲಿ ಇತ್ತೀಚೆಗೆ ಅನಾವರಣಗೊಂಡ ನೇತಾಜಿ ಪ್ರತಿಮೆಯ ರೂವಾರಿ, ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯಲ್ಲಿ ಆರು ಅಡಿ ಎತ್ತರದ ವಿಷ್ಣು ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಎರಡು ಎಕರೆಯಲ್ಲಿ ಸ್ಮಾರಕ, ಮಲ್ಟಿಫ್ಲೆಕ್ಸ್ ಚಿತ್ರಮಂದಿರ ಮಾದರಿಯಲ್ಲಿ ಹವಾನಿಯಂತ್ರಿತ ಥಿಯೇಟರ್, ಪುರುಷ- ಮತ್ತು ಮಹಿಳಾ ಕಲಾವಿದರ ಡ್ರೆಸ್ಸಿಂಗ್ ಕೊಠಡಿ, ಸುಸಜ್ಜಿತ ಶೌಚಾಲಯ, ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಪ್ರತಿಷ್ಠಾನ ಅಭಿವೃದ್ಧಿಪಡಿಸಲಿದೆ. ಮುಂಭಾಗ ಸುಂದರವಾದ ಕಾರಂಜಿ ನಿರ್ಮಾಣವಾಗಲಿದ್ದು ಸ್ಮಾರಕದ ಹೊರ ಆವರಣದಲ್ಲಿ ಸಸ್ಯೋದ್ಯಾನ ನಿರ್ಮಿಸಿ ವಿವಿಧ ಪ್ರಭೇದದ ಹೂವಿನ ಗಿಡಗಳನ್ನು ವೃತ್ತಾಕಾರದಲ್ಲಿ ನೆಟ್ಟು ಬೆಳೆಸಲಾಗುತ್ತಿದೆ.
ವಿಷ್ಣು ಸ್ಮಾರಕಕ್ಕಾಗಿ ಸರ್ಕಾರ ಸುಮಾರು 11 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು 2021ರಿಂದ ಕಾಮಗಾರಿ ಕೆಲಸ ಆರಂಭವಾಗಿದೆ. ಬೆಂಗಳೂರಿನ ಎಂ.9 ಕಂಪೆನಿಯ ನಿಶ್ಚಲ್ ಸ್ಮಾರಕದ ರೂಪುರೇಷೆ ಸಿದ್ಧಪಡಿಸಿದ್ದಾರೆ. ಕೃಷ್ಣ ಶಿಲೆಯಲ್ಲಿ ಕೆತ್ತಲಾದ ವಿಷ್ಣುವಿನ ಪ್ರತಿಮೆ ಸುತ್ತಲೂ ವೃತ್ತಾಕಾರದ ಫೋಟೋ ಗ್ಯಾಲರಿ, ಗ್ಯಾಲರಿಯ ಇಬ್ಬದಿಯಲ್ಲಿಯೂ ವಿಷ್ಣುವರ್ಧನ್ ಅಭಿನಯದ ಸಿನಿಮಾಗಳ ಡಿಜಿಟಲ್ ಪೋಸ್ಟರ್ ಪ್ರದರ್ಶನ ಇರಲಿದೆ.
ಪೊಲೀಸ್ ವಸತಿ ಮೂಲಭೂತ ಸೌಕರ್ಯಗಳ ನಿಗಮಕ್ಕೆ ಈ ನಿರ್ಮಾಣದ ಟೆಂಡರ್ ನೀಡಲಾಗಿದ್ದು ಸರಕಾರ ಈಗಾಗಲೇ ರೂ.10 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧೀನದಲ್ಲಿ ಡಾ.ವಿಷ್ಣುವರ್ಧನ್ ಪ್ರತಿಷ್ಠಾನ ಇದರ ಉಸ್ತುವಾರಿ ವಹಿಸಿಕೊಳ್ಳಲಿದೆ.