News Karnataka Kannada
Monday, April 29 2024
ಸಾಂಡಲ್ ವುಡ್

ಮೈಸೂರು: ಅಪ್ಪು ಚಿತ್ರೋತ್ಸವದಲ್ಲಿ ಭಾವುಕರಾದ ಪ್ರೇಕ್ಷಕರು

Mysuru: Audience at Appu Film Festival gets emotional
Photo Credit : By Author

ಮೈಸೂರು: ದಸರಾ ಚಲನಚಿತ್ರೋತ್ಸವದಲ್ಲಿ ಅಪ್ರು ಚಿತ್ರೋತ್ಸವ ಪ್ರೇಕ್ಷಕರನ್ನು ಭಾವುಕರನ್ನಾಗಿ ಮಾಡಿತು. ಬುಧವಾರ ನಗರದ ಐನಾಕ್ಸ್‌ನಲ್ಲಿ ಅಪ್ಪು ನಟನೆಯ ಚಿತ್ರಗಳನ್ನು ನೋಡಿದ ಪ್ರೇಕ್ಷಕರು ಅಪ್ಪು ನೆನೆದು ಕಣ್ಣೀರಾದರು.

ಇದಕ್ಕೂ ಮುನ್ನ ಅಪ್ಪು ಚಲನಚಿತ್ರೋತ್ಸವವನ್ನು ಅಶ್ವಿನಿ ಪುನಿತ್ ರಾಜಕುಮಾರ್ ಉದ್ಘಾಟಿಸಿದರು. ಚಿತ್ರಮಂದಿರ ಆವರಣದಲ್ಲಿ ಕಾರ್ಯಕ್ರಮದ ಉದ್ಘಾಟನೆಗಾಗಿ ಇಡಲಾಗಿದ್ದ ಕುರ್ಚಿಯಲ್ಲಿ ಆಸೀನರಾಗಿರುವ ಭಂಗಿಯಲ್ಲಿ ಇರುವ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ವೇಳೆಯಲ್ಲಿ ಅಶ್ವಿನಿ ಅವರು ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ನುಂಗಿಕೊಂಡಿದ್ದರು.

2ನೇ ಸ್ಕ್ರೀನ್‌ನ ಮಂದಿರದ ಒಳಗೆ ಅವರು ಪ್ರವೇಶಿಸುತ್ತಿದ್ದಂತೆ, ಅಲ್ಲಿ ಕುಳಿತ್ತಿದ್ದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಪ್ಪುವಿಗೆ ಜೈಕಾರ ಹಾಕಿದರು. ಅಶ್ವಿನಿ ಅವರು ಅವರತ್ತ ಕೈ ಬೀಸಿದರು. ಆಮೇಲೆ ರಾಜಕುಮಾರ ಚಿತ್ರ ತೆರೆಯ ಮೇಲೆ ಮೂಡಿ ಬರಲು ಶುರುವಾಯಿತು. ಒಂದೆರಡು ಕ್ಷಣವಿದ್ದು ಬಳಿಕ ಗಣ್ಯರ ಜತೆಗೂಡಿ ಚಿತ್ರಮಂದಿರದಿಂದ ಹೊರಗೆ ನಿರ್ಗಮಿಸಿದರು.

ಈ ನಡುವೆ ಶಕ್ತಿಧಾಮದ ಆಶ್ರಮದಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಅಶ್ವಿನಿಯವರು ಬೆಟ್ಟದ ಹೂವು ಸಿನಿಮಾವನ್ನು ವೀಕ್ಷಣೆ ಮಾಡಲಿದ್ದಾರೆ ಎಂದು ಚಲನಚಿತ್ರೋತ್ಸವದ ಆಯೋಜಕರು ಕೆಲ ದಿನಗಳ ಹಿಂದೆ ಪ್ರಚಾರ ಮಾಡಿದ್ದರು. ಆದರೆ ದಸರಾ ರಜೆಯ ಅಂಗವಾಗಿ ಶಕ್ತಿಧಾಮದ ಮಕ್ಕಳು ಊರಿಗೆ ಹೋಗಿರುವ ಕಾರಣ ಚಿತ್ರ ವೀಕ್ಷಿಸಲು ಬರಲಿಲ್ಲ ಎನ್ನುವ ಮಾತುಗಳು ಐನಾಕ್ಸ್ ಮೊಗಸಾಲೆಯಲ್ಲಿ ಕೇಳಿಬಂತು. ಮಹಾರಾಣಿ ಕಾಲೇಜು ಸೇರಿದಂತೆ ಇನ್ನಿತರ ಕಾಲೇಜಿನ ವಿದ್ಯಾರ್ಥಿಗಳು, ಚಲನಚಿತ್ರ ಕಾರ್ಯಾಗಾರದ ಶಿಬಿರಾರ್ಥಿಗಳು ಸಿನಿಮಾ ವೀಕ್ಷಣೆ ಮಾಡಲು ಬಂದ ಕಾರಣ ಚಿತ್ರಮಂದಿರ ಭರ್ತಿಯಾಗಿತ್ತು.

ಬುಧವಾರ ಬೆಳ್ಳಿಗ್ಗೆ 10 ಗಂಟೆಗೆ ಬೆಟ್ಟದ ಹೂವು ಪ್ರದರ್ಶನದ ಮೂಲಕ ಅಪ್ಪು ಚಿತ್ರ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಯೋಜನೆ ಮಾಡಲಾಗಿತ್ತು. ಆದರೆ ಸಮಯ ಬದಲಾವಣೆಯಾಗಿ ಉದ್ಘಾಟನಾ ಕಾರ್ಯಕ್ರಮವನ್ನು ಮಧ್ಯಾಹ್ನ 12.30ಕ್ಕೆ ನಿಗದಿಗೊಳಿಸಲಾಯಿತು. ಇದರಿಂದಾಗಿ ಉದ್ಘಾಟನಾ ಸಮಯದಲ್ಲಿ ರಾಜಕುಮಾರ ಚಲನಚಿತ್ರ ಪ್ರದರ್ಶನವಾಯಿತು. ನಿಗದಿಯಾದಂತೆ ಬೆಟ್ಟದ ಹೂವು 10ಕ್ಕೆ ಪ್ರದರ್ಶನಗೊಂಡು, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಕಂಡು ಬಂತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ. ರೂಪ ಯೋಗೇಶ್, ಚಲನಚಿತ್ರೋತ್ಸವ ಉಪ ಸಮಿತಿ ಅಧ್ಯಕ್ಷ ಹೊಸಳ್ಳಿ ವೆಂಕಟೇಶ್, ಉಪಾಧ್ಯಕ್ಷರಾದ ಸಿ.ಎಂ.ಮಹದೇವಯ್ಯ, ಪ್ರಕಾಶ್ ಪಾಟೀಲ, ಕಿರಣ್ ಜಯರಾಮೇಗೌಡ, ಸದಸ್ಯರಾದ ಉದಿತ್‌ಗೌಡ, ರಘು, ಉಪ ವಿಶೇಷಾಧಿಕಾರಿ ಆರ್.ಶೇಷ, ಕಾರ್ಯದರ್ಶಿ ಟಿ.ಕೆ.ಹರೀಶ್ ಮತ್ತಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು