ಮೈಸೂರು: ಸುಮಾರು ಹದಿನೈದು ವರ್ಷಗಳ ಬಳಿಕ ದಸರಾಕ್ಕೆ ಆಗಮಿಸಿದ್ದ ಗಜಪಡೆಯಲ್ಲಿದ್ದ ಹೆಣ್ಣಾನೆ ಮರಿಗೆ ಜನ್ಮ ನೀಡಿರುವ ಘಟನೆ ಭಾರೀ ಸುದ್ದಿ ಮಾಡಿತ್ತು. ಗಜಪಡೆಯ 14 ಆನೆಗಳ ಪೈಕಿ ಒಂದಾಗಿದ್ದ ಲಕ್ಷ್ಮಿ ಹೆಣ್ಣಾನೆ ಮರಿಗೆ ಜನ್ಮ ನೀಡಿತ್ತು. ಇದೀಗ ಈ ಮರಿಗೆ ಶ್ರೀದತ್ತಾತ್ರೇಯ ಎಂಬ ಹೆಸರನ್ನಿಡಲಾಗಿದೆ.
ದಸರೆಗೆ ಬಂದಿದ್ದ ಹೆಣ್ಣಾನೆ ಲಕ್ಷ್ಮಿ ಗರ್ಭಿಣಿ ಎಂಬುದೇ ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ಅದನ್ನು ತಾಲೀಮಿಗೂ ಬಳಸಿಕೊಳ್ಳಲಾಗಿತ್ತು. ಆದರೆ ಸಿಡಿಮದ್ದಿನ ತಾಲೀಮಿನ ಬಳಿಕ ಮಂಗಳವಾರ ಗಂಡು ಮರಿಗೆ ಜನ್ಮ ನೀಡಿತ್ತು. ಇದು ಕೆಲವರ ಖುಷಿಗೆ ಕಾರಣವಾಗಿದ್ದರೆ ಮತ್ತೆ ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೆಲ್ಲದರ ನಡುವೆ ಇದೀಗ ಹುಟ್ಟಿದ ಮರಿಗೆ ನಾಮಕರಣ ಮಾಡಲಾಗಿದ್ದು, ಶ್ರೀದತ್ತಾತ್ರೇಯ ಎಂದು ಹೆಸರಿಡಲಾಗಿದೆ.
ಇದಕ್ಕೆ ಒಂದೊಳ್ಳೆಯ ಹೆಸರಿಡುವಂತೆ ರಾಜವಂಶಸ್ಥೆ ಪ್ರಮೋದಾ ದೇವಿ ಅವರಿಗೆ ಡಿಸಿಎಫ್ ಡಾ.ವಿ.ಕರಿಕಾಳನ್ ಮನವಿ ಮಾಡಿಕೊಂಡಿದ್ದರು. ಅದರಂತೆ ಪ್ರಮೋದಾ ದೇವಿ ಅವರು ದತ್ತಾತ್ರೇಯ ಎಂಬ ಹೆಸರನ್ನು ಸೂಚಿಸಿದ್ದು, ಇದೀಗ ಅದೇ ಹೆಸರನ್ನಿಡಲಾಗಿದೆ. ಒಟ್ಟಾರೆ ಇದೀಗ ಲಕ್ಷ್ಮಿ ತನ್ನ ಪುತ್ರ ಶ್ರೀದತ್ತಾತ್ರೇಯ ಲಾಲನೆ ಪಾಲನೆಯಲ್ಲಿ ತೊಡಗಿದ್ದಾಳೆ. ಇನ್ನು ಶ್ರೀದತ್ತಾತ್ರೇಯ ತುಂಟಾಟವಾಡುತ್ತಾ ಸಮಯ ಕಳೆಯುತ್ತಿದ್ದಾನೆ.