ಮೈಸೂರು: ರಂಗಚಟುವಟಿಕೆಗಳು ಮಕ್ಕಳಲ್ಲಿ ಮನೋರಂಜನೆಯ ಜೊತೆಗೆ ಅವರ ಮನಸ್ಸಿನ ವಿಕಾಸಕ್ಕೂ ಸಹಕಾರಿಯಾಗಿವೆ ಎಂದು ಸಾಹಿತಿ ಡಾ. ಲತಾರಾಜಶೇಖರ್ ಹೇಳಿದರು.
ನಗರದ ಜೆಎಸ್ ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜೆಎಸ್ ಎ ಸ್ ರಂಗೋತ್ಸವದ ಸಮಾರೋಪದಲ್ಲಿ ಮಾತನಾಡಿ, ಸಮೂಹ ಮಾಧ್ಯಮಗಳು ಮಕ್ಕಳ ಮೇಲೆ ಬಹಳ ವೇಗವಾಗಿ ಪ್ರಭಾವಬೀರುತ್ತವೆ. ನಾಟಕ, ನೃತ್ಯ, ಸಂಗೀತಗಳು ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುತ್ತವೆ. ಮಕ್ಕಳಲ್ಲಿ ವೈಚಾರಿಕ ಶಕ್ತಿ ಜಾಗೃತವಾಗುತ್ತದೆ ಎಂದು ತಿಳಿಸಿದರು.
ನಾಟಕಕಾರರು ಹಾಗೂ ಜನಪದ ವಿದ್ವಾಂಸರಾದ ಡಾ. ಸುಜಾತ ಅಕ್ಕಿಯವರು ಮೈಸೂರು ಸೀಮೆಕನ್ನಡ ಸಂಸ್ಕೃತಿ, ಕಲೆ, ಪರಂಪರೆಗಳಿಗೆ ವಿಶಿಷ್ಟವಾದ ನೆಲೆಯನ್ನು ಹೊಂದಿದೆ. ಉತ್ತರದಿಂದ ಬಂದ ಮಹದೇಶ್ವರರು, ಮಂಟೇಸ್ವಾಮಿ, ಸಿದ್ಧಪ್ಪಾಜಿ, ರಾಚಪ್ಪಾಜಿ ಕತ್ತಲೆಯ ರಾಜ್ಯದಲ್ಲಿ ಜ್ಞಾನದ ಬೆಳಕನ್ನು ಪಸರಿಸಿದರು ಎಂದು ಹೇಳಿದರು.
ಕು. ಭ್ರಮರ ಉಡುಪ ಮತ್ತು ತಂಡ, ಪ್ರಾರ್ಥಿಸಿ, ಹೊನ್ನಶೆಟ್ಟಿ ಸ್ವಾಗತಿಸಿ, ಚಂದ್ರಶೇಖರಾಚಾರ್ ರಂಗೋತ್ಸವದ ವರದಿ ವಾಚಿಸಿದರು. ಎಂ. ನಟರಾಜು ವಂದಿಸಿದರು. ಜೆ. ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.