ಮೈಸೂರು: ಜೈನಮುನಿ ಕಾಮಕುಮಾರ ನಂದಿ ಸ್ವಾಮೀಜಿ ಮಹಾರಾಜರ ಹತ್ಯೆ ಇಡೀ ಸಮಾಜಕ್ಕೆ ಆಘಾತ ಉಂಟು ಮಾಡಿದ್ದು, ಅಹಿಂಸ ಪರಮೋ ಧರ್ಮ ಎಂದು ಬದುಕುತ್ತಿರುವ ಜೈನ ಮುನಿಗಳು ಹಾಗೂ ಸಾಧುಗಳಿಗೆ ಸರ್ಕಾರ ರಕ್ಷಣೆ ನೀಡಬೇಕು ಎಂದು ವೆಂಗಿಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಆಗ್ರಹಿಸಿದ್ದಾರೆ.
ಜೆ ಎಲ್ ಬಿ ರಸ್ತೆಯಲ್ಲಿರುವ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಜೈನಮುನಿ ಕಾಮಕುಮಾರ ನಂದಿ ಸ್ವಾಮೀಜಿ ಮಹಾರಾಜ ಶ್ರೀಗಳಿಗೆ ಸಂತಾಪ ಸಭೆಯಲ್ಲಿ ಭಾವಪೂರ್ಣ ನಮನ ಸಲ್ಲಿಸಿ ಶೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡಿದ ಅವರು ಮುನಿಗಳ ಹತ್ಯೆ ಮಾಡಿದವರಿಗೆ ಸರ್ಕಾರ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಕೃತ್ಯಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದರು.
ನಗರಪಾಲಿಕ ಸದಸ್ಯರಾದ ಮಾವಿ ರಾಮ್ ಪ್ರಸಾದ್ ಮಾತನಾಡಿ, ಜೈನ ಸಮಾಜ ಶಾಂತಿ ಪ್ರಿಯ ಸಮಾಜ ಅಹಿಂಸಾ ಮಾರ್ಗ ಸಮಾಜದ ಮೂಲಮಂತ್ರ. ಆದರೆ ಮುನಿಗಳನ್ನು ಕರೆಂಟ್ ಶಾಕ್ ನೀಡಿ, ಕೊಲೆ ಮಾಡಿ, ಮೃತ ದೇಹವನ್ನು ಬೋರವೆಲ್ನಲ್ಲಿ ತುಂಡರಿಸಿ ತುಂಬಿದ್ದಾರೆ. ಅತ್ಯಂತ ಅಮಾನೀಯ ಘಟನೆ. ಸದಾ ಸಮಾಜದ ಒಳಿತಿಗೆ ಶ್ರಮಿಸುವ ಜೈನ ಸಮಾಜದ ಮುನಿಗಳ ಹತ್ಯೆ ಆಗಿರುವುದು ಖಂಡನೀಯ. ರಾಜ್ಯ ಸರ್ಕಾರ ಮಠಾಧೀಶರಿಗೆ ಮುನಿಗಳಿಗೆ ಭದ್ರತೆ ನೀಡಬೇಕು ಎಂದರು.
ಈ ಸಂದರ್ಭ ಅಪೂರ್ವ ಸುರೇಶ್, ಒಕ್ಕಲಿಗ ಸಂಘದ ಮಾಜಿ ನಿರ್ದೇಶಕರಾದ ಮೈ ಲಾ ವಿಜಯ್ ಕುಮಾರ್, ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಶಮಾನಂದ್ ಸಾಗರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಉದ್ಯಮಿ ಜಯರಾಮ್, ಧರ್ಮರಾಜ್, ನಾಗೇಶ್, ಸಂದೀಪ್, ಎಸ್ ಎನ್ ರಾಜೇಶ್, ಚಿನ್ನ ಬೆಳ್ಳಿ ವ್ಯಾಪಾರ ನೌಕರರ ಸಂಘದ ಅಧ್ಯಕ್ಷರಾದ ಸುರೇಶ್ ಗೋಲ್ಡ್, ಬೈರತಿ ಲಿಂಗರಾಜು, ಸುಚೇಂದ್ರ, ಧರ್ಮೇಂದ್ರ, ಬಸವರಾಜು ಇನ್ನಿತರರು ಇದ್ದರು.