ಮೈಸೂರು: ತಾಲೂಕಿನ ಆಯರಹಳ್ಳಿಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನ್ನಲ್ಲಿ ಚಿರತೆ ಸೆರೆ ಸಿಕ್ಕಿದ್ದು, ಈ ಮೂಲಕ ಎರಡು ದಿನಗಳ ಹಿಂದೆ ಕಬ್ಬಿನ ಗದ್ದೆಯಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಚಿರತೆ ಮರಿಗಳನ್ನು ಮತ್ತೆ ತಾಯಿಯೊಂದಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಆಯರಹಳ್ಳಿಯ ದ್ಯಾವಣ್ಣನಾಯಕ ಎಂಬುವರ ಜಮೀನಿನಲ್ಲಿ ಬುಧವಾರ ಕಬ್ಬು ಕಟಾವು ವೇಳೆ ಮೂರು ಚಿರತೆ ಮರಿಗಳು ಕಾಣಿಸಿಕೊಂಡಿದ್ದು, ಈ ಪೈಕಿ 1 ಕಪ್ಪು ಬಣ್ಣದ ಚಿರತೆ ಮರಿಯಾಗಿತ್ತು. ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದ ಬೆನ್ನಲ್ಲೆ ಮರಿಗಳನ್ನು ತಮ್ಮ ವಶಕ್ಕೆ ಪಡೆದು ಆರೈಕೆ ಮಾಡಿದ್ದರು. ಜತೆಗೆ ಅದೇ ಕಬ್ಬಿನ ಗದ್ದೆ ಬಳಿ ತಾಯಿ ಚಿರತೆಯನ್ನು ಸೆರೆ ಹಿಡಿಯುವ ಸಲುವಾಗಿ ಬೋನ್ ಇರಿಸಲಾಗಿತ್ತು. ಒಂದು ದಿನದ ಬಳಿಕ ತಾಯಿ ಚಿರತೆ ಬೋನ್ನಲ್ಲಿ ಸೆರೆ ಸಿಕ್ಕಿದ್ದು, ತಾಯಿಯಿಂದ ದೂರವಾಗಿದ್ದ ಮರಿ ಚಿರತೆಗಳಿಗೆ ಮತ್ತೆ ತಾಯಿಯೊಂದಿಗೆ ಸೇರುವ ಅವಕಾಶ ಲಭಿಸಿದೆ.
ಸದ್ಯಕ್ಕೆ ಚಿರತೆ ಮತ್ತು ಮೂರು ಮರಿಗಳು ಅರಣ್ಯ ಇಲಾಖೆ ಕಣ್ಗಾವಲಿನಲ್ಲಿದ್ದು, ತಾಯಿ ತನ್ನ ಮರಿಯೊಂದಿಗೆ ಬೆರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಮರಿಗಳಲ್ಲಿ ಕಪ್ಪು ಚಿರತೆ ಇರುವುದರಿಂದ ವಿಶೇಷ ಕಾಳಜಿ ವಹಿಸಿರುವ ಇಲಾಖೆ ಅಧಿಕಾರಿಗಳು ಚಾಮರಾಜೇಂದ್ರ ಮೃಗಾಲಯಕ್ಕೆ ಒಪ್ಪಿಸಲು ತೀರ್ಮಾನಿಸಿದ್ದಾರೆ.