ಮೈಸೂರು: ಸಿರಿಧಾನ್ಯದ ಪುಡಿ, ಸಿರಿಧಾನ್ಯದ ಕುರುಕಲು ತಿಂಡಿ, ವಿವಿಧ ಬಗೆಯ ತಿನಿಸುಗಳು, ರಾಸಾಯನಿಕ ಮುಕ್ತ ಬೆಲ್ಲ, ಉಪ್ಪಿನಕಾಯಿ, ತೊಕ್ಕೊ, ಚಟ್ನಿ ಪುಡಿ ಪೌಡರ್, ಪಾರಂಪರಿಕ ಎತ್ತು ಚಾಲಿತ ಮರದ ಗಾಣದ ಎಣ್ಣೆ, ರಾಗಿ ಬೋಟಿ, ತೆಂಗಿನ ಕಾಯಿಯ ಉತ್ಪನ್ನ, ಬಾಳೆ ನಾರಿನ ಉತ್ಪನ್ನಗಳು, ಗೃಹ ಬಳಕೆ ಕೈ ಚೀಲಗಳು, ಸಿರಿಧಾನ್ಯದ ಚಿತ್ರವಿರುವ ಗ್ರಿಟಿಂಗ್ ಕಾರ್ಡ್ಹೀಗೆ ಹತ್ತು ಹಲವು ವಿಶೇಷತೆ ಕಂಡು ಬಂದಿದ್ದು ಮೈಸೂರಿನಲ್ಲಿ ನಡೆದ ಸಿರಿಧಾನ್ಯ ಹಬ್ಬದಲ್ಲಿ.
ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ವತಿಯಿಂದ ಮಾಜಿ ಪ್ರಧಾನಿ ಚೌದ್ರಿ ಚರಣ್ ಸಿಂಗ್ ಅವರ ಜನ್ಮದಿನದ ಸ್ಮರಣಾರ್ಥ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಗಮನಸೆಳೆಯಿತು.
ಇನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಅವರು, ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳನ್ನು ಬೆಳೆಸಿ ಮತ್ತು ಬಳಸಿ. ಹಿಂದೆ ಬಡವರ ಆಹಾರವಾಗಿದ್ದ ಸಿರಿಧಾನ್ಯಗಳು ಇಂದು ಶ್ರೀಮಂತರ ಆಹಾರದ ಪ್ರಮುಖ ಭಾಗವಾಗಿವೆ ಎಂದರು.
ಭಾರತ ಹಳ್ಳಿಗಾಡಿನ ದೇಶ. ನಮ್ಮ ಮೂಲ ಕಸುಬು ವ್ಯವಸಾಯ. ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಹಳ್ಳಿಗಳು ಉದ್ಧಾರ ಆಗದ ಹೊರತು ದೇಶ ಉದ್ಧಾರವಾಗುವುದಿಲ್ಲ ಎಂಬ ಮಹಾತ್ಮ ಗಾಂಧೀಜಿಯವರ ಮಾತು ಹಾಗೂ ರೈತನಿಗೆ ಜಮೀನಿರುವುದು ಆತನಿಗೆ ಸಾಮಾಜಿಕ ಘನತೆ ತಂದುಕೊಡುತ್ತದೆ ಎಂಬ ಅಂಬೇಡ್ಕರ್ ಅವರ ಅಭಿಪ್ರಾಯ ಬಹಳ ಅರ್ಥಗರ್ಭಿತವಾದುದು. ಭಾರತದಲ್ಲಿ ಚೌದರಿಸಿಂಗ್ ಅವರ ನೇತೃತ್ವದಲ್ಲಿ ರೈತ ಚಳುವಳಿ ಪರಿಣಾಮಕಾರಿಯಾಗಿತ್ತು. ಅವರ ಸ್ಮರಣಾರ್ಥ ಈ ದಿನ ರೈತ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದರು.
ಪ್ರತಿಯೊಂದು ರೈತ ಕುಟುಂಬ ಸ್ವಾವಲಂಬಿಯಾಗಿ ಉಳಿಯದ ಹೊರತು ಕೃಷಿ ಯಶಸ್ಸಿಗೆ ಮನ್ನಣೆಯಿಲ್ಲ. ಸಾಲ ಬಡತನದ ನಿಕೃಷ್ಟ ಮೂಲವಾಗಿದೆ. ವೈಜ್ಞಾನಿಕ ಮಾರ್ಗ ಹಾಗೂ ಹೊಸ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳುವ ಮೂಲಕ ಕೃಷಿ ಸಂಬಂಧಿತ ಸಮಸ್ಯೆಗಳಿಂದ ಹೊರಬರಬೇಕು. ಕೃಷಿ ಹಾಗೂ ಕೈಗಾರಿಕೆಗಳೆರಡು ಸಮನಾಂತರವಾಗಿ ಬೆಳವಣಿಗೆಯಾಗಬೇಕು ಇದರಿಂದ ಆರ್ಥಿಕ ಪ್ರಗತಿ ಸಾಧ್ಯವಿದೆ ಎಂದರು.
ಸಿಎಫ್ಟಿಆರ್ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಮಾತನಾಡಿ, ಸಿಎಫ್ಟಿಆರ್ಐ ಸಂಸ್ಥೆ 1950ರಲ್ಲಿ ಮೈಸೂರಿನಲ್ಲಿ ಆರಂಭವಾಗಿ ರೈತರಿಂದ ಉತ್ಪಾದನೆಯಾದ ವಸ್ತುಗಳಿಗೆ ಮೌಲ್ಯವರ್ಧನೆ ಮಾಡುವ ಕೆಲಸ ನಿರ್ವಹಿಸುತ್ತಿದೆ. ಸಿರಿಧಾನ್ಯಗಳ ಕುರಿತು ಪ್ರಸ್ತುತ 45 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು, 85 ಜನ ಈ ತಂತ್ರಜ್ಞಾನ ಕಲಿಯುತ್ತಿದ್ದಾರೆ. ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ 15 ಜನ ಮಹಿಳೆಯರ ಒಳಗೊಂಡ ಆಸರೆ ಸಂಜೀವಿನಿ ಉದ್ಯೋಗ ತಂಡ ನಮ್ಮ ಸಂಸ್ಥೆಯಲ್ಲಿ ನಾಲ್ಕು ತಂತ್ರಜ್ಞಾನಗಳ ಕುರಿತು ತರಬೇತಿ ಪಡೆದು ಈಗ ಅಮೆಜಾನ್, ಫ್ಲಿಪ್ಕಾರ್ಟ್ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಕಳೆದ ಬಾರಿ ಪಿಎಂಎಫ್ಎಂಇ ಯೋಜನೆಯಡಿಯಲ್ಲಿ ಸಾವಿರಕ್ಕೂ ಅಧಿಕ ರೈತರಿಗೆ ತರಬೇತಿ ನೀಡಲಾಗಿತ್ತು. ರೈತರಿಗೆ ನಮ್ಮ ಸಂಸ್ಥೆಯಲ್ಲಿ ತಾಂತ್ರಿಕ ಸಹಾಯ ಹಾಗೂ ನೆರವು ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಕೃಷಿ ತಜ್ಞರು ಸಿರಿಧಾನ್ಯಗಳ ಸುಧಾರಿತ ಬೇಸಾಯ ಕ್ರಮಗಳು ಮೌಲ್ಯವರ್ಧನೆ ಹಾಗೂ ಸಿರಿಧಾನ್ಯ ಖಾದ್ಯಗಳ ತಯಾರಿಕೆ ಕುರಿತು ಮಾಹಿತಿ ನೀಡಿದರು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಜಂಟಿ ನಿರ್ದೇಶಕ ಡಾ.ಚಂದ್ರಶೇಖರ್, ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಮುಖಂಡರುಗಳಾದ ಕಲ್ಮಳ್ಳಿ ಶಿವಕುಮಾರ್, ಬನ್ನೂರು ನಾರಾಯಣ್ ಸೇರಿದಂತೆ ಇತರರು ಭಾಗವಹಿಸಿದ್ದರು.