ಮೈಸೂರು: ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಹತ್ಯೆ ಮಾಡಿದ ವ್ಯಕ್ತಿಗೆ ಮೈಸೂರಿನ ಐದನೇ ಹೆಚ್ಚುವರಿ ಜಿ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಎಚ್.ಡಿ.ಕೋಟೆಯ ಮಟಗೇರಿ ಗ್ರಾಮದ ಸಿದ್ದರಾಜು ಎಂಬಾತ ಪತ್ನಿ ಸಹನಾ ಅವರನ್ನು ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ. ಸಿದ್ದರಾಜು ಕಳೆದ 2012ರಲ್ಲಿ ಸಹನಾ ಅವರನ್ನು ವಿವಾಹವಾಗಿದ್ದು, ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಜಗಳವಾಡುತ್ತ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ. 2018ರ ಆಗಸ್ಟ್ 5 ರಂದು ಮನೆಯಲ್ಲಿ ಮತ್ತೇ ಇದೇ ವಿಚಾರವಾಗಿ ಗಲಾಟೆ ಆರಂಭವಾಗಿ ಸಹನಾ ಅವರ ಮೇಲೆ ಸಿದ್ದರಾಜು ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ಸಹನಾ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಮೃತರ ಪೋಷಕರು ನೀಡಿದ ದೂರಿನ ಮೇರೆಗೆ ಪತಿ ಸಿದ್ದರಾಜು ಸೇರಿದಂತೆ ಸಿದ್ದರಾಜು ಸೋದರ ಸುರೇಶ್, ಅತ್ತಿಗೆ ದೇವಮ್ಮ ಅವರ ವಿರುದ್ದ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅವರು, ಸಿದ್ದರಾಜು ಮೇಲಿನ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯೊಂದಿಗೆ 17 ಸಾವಿರ ರೂ. ದಂಡ ವಿಧಿಸಿದ್ದಾರೆ. ಉಳಿದ ಇಬ್ಬರ ಮೇಲಿನ ಆರೋಪಕ್ಕೆ ಸ್ಪಷ್ಟವಾದ ಸಾಕ್ಷಾಧಾರ ಇರದ ಕಾರಣ ಬಿಡುಗಡೆ ಮಾಡಿದ್ದಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರರಾದ ನಾಗಪ್ಪ ಸಿ. ನಾಕ್ಮನ್ ವಾದ ಮಂಡಿಸಿದ್ದರು.