ಮೈಸೂರು: ಪಿರಿಯಾಪಟ್ಟಣ ತಾಲ್ಲೂಕಿಗೆ ಕಾವೇರಿ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು ಶೀಘ್ರ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ತಿಮಕಾಪುರ ಗ್ರಾಮದಲ್ಲಿ ಕುಂಚಟಿಗ ಒಕ್ಕಲಿಗರ ಸಂಘ ಉದ್ಘಾಟಿಸಿ ಅವರು ಮಾತನಾಡಿ, ತಾಲ್ಲೂಕಿನ ಪ್ರತಿಯೊಂದು ಮನೆಗೂ ಕಾವೇರಿ ನೀರು ಪೂರೈಸಬೇಕು ಎನ್ನುವ ಉದ್ದೇಶದಿಂದ 240 ಕೋಟಿ ರೂ ಕಾಮಗಾರಿಯ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದಿಂದ ಅನುದಾನ ಮಂಜೂರಾದ ಕೂಡಲೇ ಕಾಮಗಾರಿ ನಡೆಸಲಾಗುವುದು, ತಿಮಕಾಪುರ ಗ್ರಾಮ ಅತ್ಯಂತ ಶಾಂತಿಯುತವಾದ ಗ್ರಾಮವಾಗಿ ಎಲ್ಲ ಸಮುದಾಯದವರು ಅನ್ಯೋನ್ಯತೆಯಿಂದ ಬಾಳುತ್ತಿದ್ದಾರೆ.
ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಅನುದಾನ ನೀಡುವಂತೆ ಮನವಿ ಬಂದಿದ್ದು, ನಿರ್ಮಾಣಕ್ಕೆ ಅಂದಾಜು 2 ಕೋಟಿ ರೂ ವೆಚ್ಚವಾಗಲಿದ್ದು, ಗ್ರಾಮಸ್ಥರು ಸಹ ದೇಣಿಗೆ ಸಂಗ್ರಹಿಸುವುದಾಗಿ ತಿಳಿಸಿರುವುದರಿಂದ ಆರಂಭಿಕ ಹಂತದಲ್ಲಿ 20 ಲಕ್ಷ ರೂಪಾಯಿಗಳ ಅನುದಾನ ನೀಡುವುದಾಗಿ ತಿಳಿಸಿದರು. ತಿಮಕಾಪುರ – ಚೌತಿ ಗ್ರಾಮದ ರಸ್ತೆ ಅಭಿವೃದ್ದಿಗಾಗಿ 50 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು ಆದಷ್ಟು ಶೀಘ್ರ ಕಾಮಗಾರಿ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ, ಕೃಷಿ ವಿಜ್ಞಾನಿ ಡಾ.ವಸಂತ್ ಕುಮಾರ್ ತಿಮಕಾಪುರ, ಉದ್ಯಮಿ ಜಿ.ಶಂಕರ್, ಮೈಮುಲ್ ನಿರ್ದೇಶಕ ಎಚ್.ಡಿ.ರಾಜೇಂದ್ರ ಮಾತನಾಡಿದರು, ಈ ವೇಳೆ ಹಲವರು ಜೆಡಿಎಸ್ ಪಕ್ಷ ಸೇರಿದರು, ಶಾಸಕ ಕೆ.ಮಹದೇವ್ ಮತ್ತು ಪಿ.ಎಂ.ಪ್ರಸನ್ನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.