ಪಿರಿಯಾಪಟ್ಟಣ: ಜಮೀನಿಗೆ ತೆರಳಿದ್ದ ಯುವಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ನಡೆದಿದೆ. ಅದೃಷ್ಟ ವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ಚಂದ್ರೇಗೌಡ ಅವರ ಪುತ್ರ ರಾಜೇಶ್ (27) ಚಿರತೆ ದಾಳಿಗೆ ಒಳಗಾದ ಯುವಕ. ಈತ ಎಂದಿನಂತೆ ತಮ್ಮ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭ ಚಿರತೆಯೊಂದು ದಾಳಿ ಮಾಡಿದ್ದು ಕಿವಿ ಭಾಗದಲ್ಲಿ ಗಾಯಗೊಳಿಸಿದೆ, ತಕ್ಷಣ ಇವರನ್ನು ಸ್ಥಳೀಯರು ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವಿಷಯ ತಿಳಿದು ಘಟನ ಸ್ಥಳಕ್ಕೆ ಆರ್ಎಫ್ ಒ ಕಿರಣ್ ಕುಮಾರ್, ಡಿಆರ್ ಎಫ್ಒ ಪಾರ್ವತಿ, ಗಾರ್ಡ್ ರಾಜು, ಸತೀಶ್, ಚಾಲಕ ಪುನೀತ್ ಆಗಮಿಸಿ ಸ್ಥಳ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿ ಚಿರತೆ ಸೆರೆ ಹಿಡಿಯುವ ಸಲುವಾಗಿ ಜನರಿಗೆ ಜಾಗೃತಿ ಮೂಡಿಸಿದರು, ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಸ್ಥಳೀಯರು ಕೂಡಲೇ ಚಿರತೆಯನ್ನು ಸೆರೆಹಿಡಿದು ಗ್ರಾಮಸ್ಥರು ನೆಮ್ಮದಿ ಜೀವನ ನಡೆಸಲು ಸಹಕರಿಸುವಂತೆ ಒತ್ತಾಯಿಸಿದರು.
ಅರಣ್ಯ ಇಲಾಖೆ ಹುಣಸೂರು ವಿಭಾಗದ ಡಿಸಿಎಫ್ ಸೀಮಾ, ಎಸಿಎಫ್ ಮಹದೇವ್ ಅವರ ಸೂಚನೆ ಮತ್ತು ಮಾರ್ಗದರ್ಶನದಲ್ಲಿ ಆರ್ಎಫ್ ಒ ಕಿರಣ್ ಕುಮಾರ್ ಹಾಗೂ ಡಿಆರ್ ಎಫ್ಒ ಪಾರ್ವತಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜೇಶ್ ಆರೋಗ್ಯ ವಿಚಾರಿಸಿ ವೈದ್ಯರೊಂದಿಗೆ ಮಾತುಕತೆ ನಡೆಸಿ ಗಾಯಾಳು ರಾಜೇಶ್ ಮತ್ತು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಚಿರತೆ ದಾಳಿ ನಡೆಸಿದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿ ಎರಡು ಬೋನು ಇರಿಸಿ ಸ್ಥಳೀಯರು ಆ ಸ್ಥಳದಲ್ಲಿ ಓಡಾಡದಂತೆ ಎಚ್ಚರಿಕೆ ನೀಡಿ ಚಿರತೆ ಸೆರೆಗೆ ಕಾರ್ಯಾಚರಣೆ ರೂಪಿಸಿದ್ದಾರೆ.