ಚಾಮರಾಜನಗರ: ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿದ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮೋಡಳ್ಳಿ ಸಮೀಪದ ಕಂಚಗಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ನಂಜಪ್ಪ ಎಂಬುವವರೇ ಚಿರತೆಯ ದಾಳಿಗೊಳಗಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೋಳದ ಫಸಲು ಕಾವಲಿಗಾಗಿ ಜಮೀನಿಗೆ ತೆರಳಿದ್ದ ರೈತ ನಂಜಪ್ಪ ಅವರು ಫೋನಿನಲ್ಲಿ ಮಾತಾಡಿಕೊಂಡು ಮಲಗಿದ್ದರು. ಈ ವೇಳೆ ರಾತ್ರಿ 9 ಗಂಟೆ ಸಮಯದಲ್ಲಿ ಗುಡಿಸಲಿಗೆ ನುಗ್ಗಿದ ಚಿರತೆ ನಂಜಪ್ಪ ಮೇಲೆ ಬಿದ್ದು ತೋಳಿಗೆ ಪರಚಿದೆ. ಅವರು ಬೆಕ್ಕು ಇರಬೇಕೆಂದು ತಿಳಿದು ರಗ್ಗಿನ ಸಮೇತ ಬಿಸಾಡಿದ್ದಾರೆ. ಹೊರಗೆ ಬಿದ್ದಾಗ ಅದು ಚಿರತೆ ಎಂದು ಗೊತ್ತಾಗಿದೆ. ಕೂಡಲೇ ದೊಣ್ಣೆ ಹಿಡಿದು ಬೆದರಿಸಿದಾಗ ಓಡಿ ಹೋಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಸೋಮವಾರ ರಾತ್ರಿ ಕಗ್ಗಲಿಗುಂದಿ ಗ್ರಾಮದಲ್ಲಿ ಬಾಲಕಿಯೊಬ್ಬಳ ಮೇಲೆ ದಾಳಿ ನಡೆಸಿದ್ದ ಚಿರತೆ ಇದೇ ಇರಬೇಕು ಎಂದು ಗ್ರಾಮಸಸ್ಥರು ಶಂಕಿಸಿದ್ದಾರೆ. ಕಗ್ಗಲಿಗುಂದಿ ಗ್ರಾಮಸ್ಥರು ಆತಂಕದ ಸಮಯದಲ್ಲಿರುವಾಗಲೇ ಕಂಚಗಳ್ಳಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿರುವುದು ಮೋಡಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರನ್ನು ಮತ್ತಷ್ಟು ಆತಂಕಕ್ಕೀಡಾಗುವಂತೆ ಮಾಡಿದೆ. ಅರಣ್ಯ ಇಲಾಖೆ ಶೀಘ್ರವಾಗಿ ಚಿರತೆಯನ್ನು ಹಿಡಿದು ಬೇರೆಡೆಗೆ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.