ವರುಣಾ: ಚಿರತೆ ದಾಳಿಗೆ ಎರಡು ಕುರಿಗಳು ಬಲಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ರವಿ ಸ್ವಾಮಿ ಎಂಬವರಿಗೆ ಸೇರಿದ ಕುರಿಗಳಾಗಿದ್ದು, ಜಮೀನಿನಲ್ಲಿ ಮೇಯಿಸುತ್ತಿದ್ದಾಗ ಚಿರತೆ ದಾಳಿ ನಡೆಸಿದೆ ಎನ್ನಲಾಗಿದೆ.
ಪೊದೆಯೊಳಗೆ ಅವಿತು ಕುಳಿತಿದ್ದ ಚಾಲಾಕಿ ಚಿರತೆ ಒಂದು ಕುರಿಯ ಮೇಲೆ ದಾಳಿ ನಡೆಸಿ, ಅದನ್ನು ತಿಂದ ನಂತರ ಮತ್ತೊಂದು ಕುರಿಯ ಮೇಲೆ ದಾಳಿ ಮಾಡಿ ಕೊಂಡೊಯ್ದಿದೆ. ಮನೆಗೆ ಬಂದು ನೋಡಿದಾಗ ಕುರಿಗಳ ಸಂಖ್ಯೆ ಕಡಿಮೆ ಇರುವುದು ತಿಳಿದಿದೆ. ಮತ್ತೆ ಆ ಸ್ಥಳಕ್ಕೆ ಬಂದು ನೋಡಿದಾಗ ಒಂದು ಕುರಿಯ ಕಳೇಬರ ಪತ್ತೆಯಾಗಿದ್ದು, ಅರೆಬೆರೆ ತಿಂದು ಹೋಗಿದೆ.
ತಗಡೂರು, ಚುಂಚನಹಳ್ಳಿ, ಕಾರ್ಯ, ಚಿನ್ನಂಬಳ್ಳಿ, ಗ್ರಾಮಗಳಲ್ಲಿ ಚಿರತೆಯ ಕಾಟ ಹೆಚ್ಚಾಗಿದ್ದು, ಜಮೀನುಗಳಿಗೆ ರೈತರು ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಕುರಿಗಳನ್ನು ನಂಬಿಕೊಂಡು ನಾವು ಜೀವನ ಸಾಗಿಸುತ್ತೇವೆ. ಚಿರತೆಯ ಹಾವಳಿಯಿಂದ ಜಮೀನುಗಳಿಗೆ ತೆರಲು ನಮಗೆ ಭಯ ಆಗುತ್ತಿದೆ.
ದಿನೇ ದಿನೇ ಒಂದಲ್ಲ ಒಂದು ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸುತ್ತಿದೆ. ಒಂದು ವೇಳೆ ಮನುಷ್ಯರ ಮೇಲೆ ದಾಳಿ ಮಾಡಿದರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬೋನು ಇರಿಸಿ ಚಿರತೆಯನ್ನು ಸೆರೆಹಿಡಿಯಬೇಕು. ಕುರಿಗಳನ್ನು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ರೈತ ರವಿ ಸ್ವಾಮಿ ಒತ್ತಾಯ ಮಾಡಿದ್ದಾರೆ.