ಮೈಸೂರು: ಇಂಜಿನಿಯರ್ ಪದವೀಧರರ ಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದರೊಂದಿಗೆ ಉದ್ಯೋಗ ಹೆಚ್ಚಳಕ್ಕೆ ಗಮನಹರಿಸಬೇಕು ಎಂದು ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು.
ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ 5ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಇಂಜಿನಿಯರ್ಗಳು ಜಾದುಗಾರರಾಗಬೇಕಿದೆ ಎಂದು ಹೇಳಿದರಲ್ಲದೆ, ಪ್ರತಿ ವರ್ಷ ಭಾರತದಲ್ಲಿ 15 ಲಕ್ಷ ವಿದ್ಯಾರ್ಥಿಗಳು ಇಂಜಿನಯರ್ ಪದವಿ ಪಡೆಯುತ್ತಿದ್ದಾರೆ. ಆದರೆ, ಶೇ.20ರಷ್ಟು ಉದ್ಯೋಗವೂ ಸೃಷ್ಟಿಯಾಗುತ್ತಿಲ್ಲ. ಪದವೀಧರರು ಬೊಂಡ, ಬಜ್ಜಿ ಮಾರುವಂತಹ ಮಾತುಗಳನ್ನು ಕೇಳುತ್ತಿದ್ದೇವೆ. ಅದಕ್ಕೂ ಕೌಶಲ ಬೇಕಿದೆ ಎಂದು ಅಭಿಪ್ರಾಯಪಟ್ಟರು.
ಜಾದೂಗಾರರ ಮ್ಯಾಜಿಕ್ ಅನ್ನು ಇಂಜಿನಿಯರ್ಸ್ ಸೃಷ್ಟಿ ಮಾಡಬಹುದು. ಮ್ಯಾಜಿಕ್ ಕಣ್ಗಟ್ಟು ವಿದ್ಯೆ. ಅದನ್ನು ಸಾಕಾರ ಮಾಡಬಹುದು. 5ವರ್ಷಗಳ ಶಿಕ್ಷಣದ ಇಂಜಿನಿಯರ್ ವಿದ್ಯಾರ್ಥಿಗಳು ಮ್ಯಾಜಿಕ್ ಕ್ರಿಯೆಟ್ ಮಾಡಬೇಕು ಎಂದು ಸಲಹೆ ನೀಡಿದರು. ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಉದ್ದೇಶ ಇರುವುದಿಲ್ಲ. ವ್ಯಕ್ತಿಯ ಉದ್ದೇಶದ ಮೇಲೆ ಪರಿಣಾಮವನ್ನು ಎದುರಿಸುತ್ತೇವೆ. ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಒಳಿತು ಮತ್ತು ವಿನಾಶವನ್ನು ಕಂಡಿದ್ದೇವೆ ಉದ್ದೇಶ ಹೃದಯದಿಂದ ಬರಬೇಕು ಎಂದು ತಿಳಿಸಿದರು.
ಮುಂದಿನ 20 ವರ್ಷಗಳು ಅತ್ಯಂತ ಕ್ಲಿಷ್ಟಕರವಾದದ್ದು. ಇದು ಇಂಜಿನಿಯರ್ಗಳ ಕಾಲ. ಕೋಟ್ಯಂತರ ಜನರ ಜೀವನ ಮಟ್ಟವನ್ನು ಉನ್ನತೀಕರಿಸುವ ಸವಾಲು ಮತ್ತು ಜವಾಬ್ದಾರಿ ಇಂಜಿನಿಯರ್ ವಿದ್ಯಾರ್ಥಿಗಳ ಮೇಲಿದೆ ಎಂದು ಸಲಹೆ ನೀಡಿದರು.
ನಮ್ಮ ದೇಶ ಬಹುತ್ವದಿಂದ ಕೂಡಿದೆ. ವಿವಿಧ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳಿವೆ. ವಿದೇಶಗಳಂತೆ ಏಕರೂಪತೆ ಇದ್ದಿದ್ದರೆ ವಿಶ್ವದಲ್ಲಿಯೇ ಶಕ್ತಿಶಾಲಿ ರಾಷ್ಟ್ರವಾಗುತ್ತಿದ್ದವು. ಹಲವು ವಿದೇಶಗಳು ನಮ್ಮ ಸಂಸ್ಕೃತಿಯಿಂದ ಬೆಳೆದಿವೆ. ನಮಗೆ ಗೊತ್ತಿರದ ಅನೇಕ ವಿಚಾರಗಳನ್ನು ಅವರು ತಿಳಿದುಕೊಂಡಿದ್ದಾರೆ ಎಂದರು.
ಇ ವಿಭಾಗದಿಂದ ಎನ್.ವೈಷ್ಣವಿ, ಆರ್.ಕೃತಿಕಾ, ವಿ.ಎನ್.ದೀಪ್ತಿ, ಎಸ್.ವೀಣಾ, ವಿ.ಸಂಜನಾ, ಆರ್.ಕೀರ್ತನಾ, ಸಿ.ರಕ್ಷಾ, ಬಿ.ವಿ.ಭೂಮಿಕಾ, ಎಂ.ವಿ.ಐಶ್ವರ್ಯ, ಎಸ್.ಸೌಗಂಧಿನಿ, ಅಂಕಿತ್ ಮಹದೇವ್, ಅಕ್ಷತ್ ಎನ್.ಸೆಠ್, ಬಿಸಿಎ ವಿಭಾಗದಿಂದ ಯು.ಸಹನಾ ಭಟ್. ಎಂ.ಟೆಕ್ ವಿಭಾಗದಿಂದ ಟಿ.ಆರ್.ನಿವೇದಿತಾ, ಎಂ.ಆರ್.ಮೋನಿಕಾ, ಎ.ನಾಗಾರ್ಜುನ, ಕೆ.ಪಿ.ತೇಜಸ್ವಿನಿ, ಡಿ.ಎಸ್.ಹೇಮಲತಾ, ಎ.ಎಚ್.ನಿಧಿ, ಪಿ.ಸ್ವಾತಿ, ಕ್ರಿಸ್ ಲಿಂಸೆ ಜೆ, ವಿ.ಶ್ರೀದೇವಿ, ಬಿ.ಆರ್.ರಕ್ಷಕ್, ಬಿ.ಕಾವ್ಯಶ್ರೀ, ಬಿ.ವಿ.ಕೃತಿಕಾ, ಎಂ.ಐಶ್ವರ್ಯ ಚಿನ್ನದ ಪದಕಕ್ಕೆ ಭಾಜನರಾದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ತಾಂತ್ರಿಕ ಶಿಕ್ಷಣ ವಿಭಾಗದ ಸಲಹೆಗಾರ ಪ್ರೊ.ಎಂ.ಎಚ್.ಧನಂಜಯ, ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ.ಸುರೇಶ, ಕುಲಪತಿ ಪ್ರೊ.ಎ.ಎನ್.ಸಂತೋಷ್ ಕುಮಾರ್, ಕುಲಸಚಿವ ಪ್ರೊ.ಎಸ್.ಎ.ಧನರಾಜ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಪಿ.ನಂಜುಂಡಸ್ವಾಮಿ ಉಪಸ್ಥಿತರಿದ್ದರು.