ಸಾಲಿಗ್ರಾಮ: ಮೈಸೂರು ನಗರದಲ್ಲಿ ಫೆ.6ರಂದು ರಾಜ್ಯಮಟ್ಟದ ಬೌದ್ಧ ಮಹಾ ಸಮ್ಮೇಳನಕ್ಕೆ ರಾಜ್ಯದ ಎಲ್ಲಾ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಜನರು ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಾ. ರಾ ನಂದೀಶ್ ಹೇಳಿದರು.
ಸಾಲಿಗ್ರಾಮಕ್ಕೆ ಆಗಮಿಸಿದ ಬೌದ್ಧ ಮಹಾ ಸಮ್ಮೇಳನದ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಧರ್ಮ ಮಾರ್ಗದಲ್ಲಿ ನಿರಂತರವಾಗಿ ಮುನ್ನಡೆಯಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತೀಯ ಬೌದ್ಧಮಹಾ ಸಭಾ ಎಂಬ ಸಂಸ್ಥೆಯನ್ನು ನಮಗೆ ಕೊಟ್ಟರು ಜಾಗತಿಕ ಕಾಲಘಟ್ಟದಲ್ಲಿ ಬೌದ್ಧ ಧರ್ಮವೊಂದು ಮನುಷ್ಯನ ಉನ್ನತಿಗೆ ಶ್ರಮಿಸುತ್ತಾ ಮಾನವನ ಸ್ವ ಪ್ರಜ್ಞೆಗೆ ಆಸ್ಪದ ಕೊಟ್ಟು ನಿನಗೆ ನೀನೆ ಬೆಳಕು ಎಂಬ ಸಂದೇಶವನ್ನು ಡಾ. ಬಿ. ಆರ್. ಅಂಬೇಡ್ಕರ್ ಸಂಕಲ್ಪವನ್ನು ಪ್ರತಿಯೊಬ್ಬರು ಮನಮುಟ್ಟುವಂತೆ ಮಾಡಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳ ಬೇಕು ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಹಾಗೂ ಮಾನವೀಯ ಮೌಲ್ಯಗಳು ಹಾಗೂ ಆದರ್ಶಗಳನ್ನು ಸಮಾಜದಲ್ಲಿ ಎಲ್ಲಾ ಸಮಾಜವು ಪಾಲಿಸಿದರೆ ಶೋಷಿತರು, ದುರ್ಬಲರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢವಾಗುವುದರಿಂದ ಉತ್ತಮ ಸಮಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು.
ಈ ವೇಳೆ ಸಾರಾ ನಂದೀಶ್ ರಥಯಾತ್ರೆಗೆ ಚಾಲನೆ ನೀಡಿ ಡಾ.ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.
ಗ್ರಾಂ ಪಂ ಸದಸ್ಯರಾದ ಗಂಗಾಧರ, ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಫಿಶ್ ಶಿವು, ಯುವ ಮುಖಂಡ ಬ್ರಿಜೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ರಥಯಾತ್ರೆಯ ಮೇಲ್ವಿಚಾರಕ ಗೋವಿಂದ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ಕಂಠಿಕುಮಾರ್, ಜೆಡಿಎಸ್ ಎಸ್. ಸಿ ಘಟಕದ ನಗರಾಧ್ಯಕ್ಷ ಶ್ರೀನಿವಾಸ್ ಮತ್ತಿತರರು ಇದ್ದರು.