ಹುಣಸೂರು: ಕೊಡಗಿಗೆ ರೈಲ್ವೇ ಸಂಪರ್ಕ ಕಲ್ಪಿಸುವ 87.5 ಕಿಲೋಮೀಟರ್ ಉದ್ದದ ಮೈಸೂರು- ಕುಶಾಲನಗರ ರೈಲ್ವೇ ಮಾರ್ಗದ ಸರ್ವೆ ಕಾರ್ಯಕ್ಕೆ ಬಿಳಿಕೆರೆ ಸಮೀಪದ ಚಿಕ್ಕಬೀಚನಹಳ್ಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಒಟ್ಟು 1854.62 ಕೋಟಿ ರೂ. ವೆಚ್ಚದ ಉದ್ದೇಶಿತ ರೈಲ್ವೇ ಯೋಜನೆಗೆ 2019ರ ಫೆಬ್ರವರಿ 27ರಂದು ರೈಲ್ವೇ ಸಚಿವಾ ಲಯ ಅನುಮೋದನೆ ನೀಡಿತ್ತು. ಈ ಹಿಂದೆ 2018 ರಲ್ಲಿ ಈ ರೈಲ್ವೇ ಯೋಜನೆ ಆರ್ಥಿಕವಾಗಿ ಲಾಭದಾಯಕವಾಗಿಲ್ಲ ಎಂಬ ಕಾರಣ ಮುಂದೊಡ್ಡಿ ರೈಲ್ವೇ ಇಲಾಖೆ ಯೋಜನೆಯನ್ನೇ ಕೈ ಬಿಟ್ಟಿತ್ತು. ನಂತರ ಸಂಸದ ಪ್ರತಾಪ ಸಿಂಹ ಅವರ ಒತ್ತಡದ ನಂತರ ಯೋಜನೆ ಅನುಮೋದನೆಗೊಂಡಿದ್ದು ಫೈನಲ್ ಲೊಕೇಷನ್ ಸರ್ವೆ ನಡೆಸಲು ಇಲಾಖೆ ಎರಡು ಬಾರಿ ಟೆಂಡರ್ ನೀಡಿದ್ದರೂ ಗುತ್ತಿಗೆ ಪಡೆದ ಗುತ್ತಿಗೆದಾರರು ಸರ್ವೆ ಕಾರ್ಯ ನಡೆಸದೆ ನಿರ್ಗಮಿಸಿದ್ದರು. ಇದೀಗ ಮೂರನೇ ಬಾರಿ ಸರ್ವೆಗೆ ಟೆಂಡರ್ ನೀಡಿದ್ದು ಸರ್ವೆ ಕಾರ್ಯ ಪ್ರಗತಿಯಲ್ಲಿರುವಾಗಲೇ ಚಿಕ್ಕ ಬೀಚನಹಳ್ಳಿ ಗ್ರಾಮಸ್ಥರು ಸಂಸದ ಪ್ರತಾಪ್ ಸಿಂಹ ವಿರುದ್ದ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರಭಾವಿಗಳ ಒತ್ತಡಕ್ಕೆ ಮಣಿದು ಸಂಸದ ಪ್ರತಾಪ್ ಸಿಂಹ ಬೇರೆಡೆ ಹೋಗುತ್ತಿದ್ದ ರೈಲ್ವೆ ಮಾರ್ಗವನ್ನ ನಮ್ಮ ಊರಿನ ಕಡೆ ಹೋಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೈಸೂರು ಕುಶಾಲನಗರ ಮಾರ್ಗದ ರೈಲ್ವೆ ಮಾರ್ಗವನ್ನು ಎರಡು ಭಾರಿ ಬದಲಾವಣೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಕುರಿತು ಮಾತನಾಡಿದ ಗ್ರಾಮಸ್ಥರಾದ ಬೀರೇ ಗೌಡ ಅವರು ಬಿಳಿಕೆರೆಯಿಂದ 5 ಕಿಲೋಮೀಟರ್ ಒಳಗೆ ನಮ್ಮ ಗ್ರಾಮವಿದ್ದು ಸೋಮವಾರ ರೈಲ್ವೇ ಅಧಿಕಾರಿಗಳು ಬಂದು ಹೊಲ ಮನೆಗಳ ಮೇಲೆ ಪೇಂಟ್ ನಿಂದ ಗುರುತು ಹಾಕಿ ಹೋಗಿದ್ದಾರೆ. ಊರಿನ ಜನರೆಲ್ಲರೂ ಅತಿ ಸಣ್ಣ ಹಾಗೂ ಸಣ್ಣ ರೈತರಾಗಿದ್ದು ಭೂಮಿ ಕಳೆದುಕೊಂಡರೆ ಬೀದಿಗೆ ಬೀಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಉದ್ದೇಶಿತ ಮಾರ್ಗಕ್ಕೆ 300 ಅಡಿಗಳಷ್ಟು ಅಗಲ ಭೂಮಿ ಬೇಕಾಗಿದ್ದು ಗ್ರಾಮದಲ್ಲಿ ಸುಮಾರು ಎರಡು ಕಿಲೋಮೀಟರ್ ದೂರ ಹಾದು ಹೋಗಲಿದೆ ಎಂದರಲ್ಲದೆ ರೈಲು ಹಾದು ಹೋದರೆ ಅಕ್ಕ ಪಕ್ಕದಲ್ಲಿ ವಾಸಿಸಲು ಸಾದ್ಯವಾಗುವುದಿಲ್ಲ ಎಂದು ಹೇಳಿದರು. ಜನವಸತಿ ಪ್ರದೆಶದಿಂದ ಹೊರಗೆ ರೈಲ್ವೇ ಮಾರ್ಗ ನಿರ್ಮಿಸುವಂತೆ ಆವರು ಒತ್ತಾಯಿಸಿದರು.
ರೈಲ್ವೇ ಇಲಾಖೆಯು ಈಗಾಗಲೇ ಭೂ ಸ್ವಾಧೀನ ಸರ್ವೇ, ರೈಲ್ವೇ ಹಳಿ ಸರ್ವೇ, ರೈಲು ಹಾದು ಹೋಗುವ ಪ್ರದೇಶದ ಸರ್ವೇ ಯನ್ನು ಪೂರ್ಣಗೊಳಿಸಿದ್ದು ಇದೀಗ ಯಾವುದೇ ರೈಲು ಮಾರ್ಗ ನಿರ್ಮಾಣ ಮಾಡುವ ಮುನ್ನ ನಡೆಸಬೇಕಿರುವ ಪ್ರಯಾಸದ ಕೊನೆ ಹಂತದ ಫೈನಲ್ ಲೊಕೇಷನ್ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಇದರಲ್ಲಿ ಭೌಗೋಳಿಕತೆ, ಭೂಮಿಯ ಸ್ಥಿರತೆ ಮೊದಲಾದವುಗಳನ್ನು ನಿರ್ಧರಿಸಲಾಗು ತ್ತದೆ. ಹಸಿರು ವಲಯ, ಬೆಟ್ಟ ಸಾಲುಗಳು, ನದಿ, ತೊರೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಸರ್ವೇ ಕಾರ್ಯಕ್ಕೆ ಅತ್ಯಾಧುನಿಕ ಡಿಜಿಪಿಎಸ್ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಈ ಸರ್ವೆಯಲ್ಲಿ ಮಾರ್ಗದಲ್ಲಿ ದೊಡ್ಡ ಮತ್ತು ಕಿರು ಸೇತುವೆಗಳ ನಿರ್ಮಾಣ, ತಡೆಗೋಡೆಗಳು, ಮತ್ತು ರೈಲ್ವೇ ನಿಲ್ದಾಣಗಳು, ಲೆವೆಲ್ ಕ್ರಾಸಿಂಗ್ ನಿರ್ಮಾಣ ಕ್ಕೆ ಸ್ಥಳವನ್ನು ಅಂತಿಮಗೊಳಿಸಲಾಗುವುದು. ಇದರ ಜತೆಗೇ ಈ ಯೋಜನೆಗೆ ಆಗುವ ನಿಖರವಾದ ಒಟ್ಟು ವೆಚ್ಚವನ್ನೂ ನಿರ್ಧರಿಸಲಾಗುವುದು. ಈ ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇಕಡಾ 50 ರಷ್ಟು ಬಂಡವಾಳ ಹೂಡಲಿವೆ.