ಹುಣಸೂರು: ಅನಧಿಕೃತ (ಕಾರ್ಡ್ದಾರರು)ವಾಗಿ ಬೆಳೆದಿರುವ ತಂಬಾಕು ಮಾರಾಟಕ್ಕೆ ಕೇಂದ್ರ ವಾಣಿಜ್ಯ ಮಂತ್ರಾಲಯವು ಅನುಮತಿ ನೀಡಿದೆ ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಎಂ.ಲಕ್ಷ್ಮಣ್ರಾವ್ ತಿಳಿಸಿದ್ದಾರೆ.
ಅಧಿಕೃತ ಬೆಳೆಗಾರರ ಹೆಚ್ಚುವರಿ ತಂಬಾಕು ಮಾರಾಟಕ್ಕೂ ಸಹ ಅನುಮತಿ ದೊರೆತಿದ್ದು, ಕಾರ್ಡ್ದಾರರಿಗೆ ಹಾಗೂ ಅಧಿಕೃತ ಬೆಳೆಗಾರರ ಹೆಚ್ಚುವರಿ ತಂಬಾಕಿಗೆ ವಿಧಿಸುತ್ತಿದ್ದ ಶೇ.5ರ ದಂಡವನ್ನು ಸಹ ಸಂಪೂರ್ಣ ರದ್ದುಗೊಳಿಸಿರುವುದು ಬೆಳಕಿಗೆ ಬಂದಿದೆ.
2022-23ನೇ ಸಾಲಿಗೆ ಕರ್ನಾಟಕಕ್ಕೆ 100ಮಿಲಿಯನ್ ಕೆ.ಜಿ. ತಂಬಾಕು ಉತ್ಪಾದನೆಗೆ ಅವಕಾಶವಿತ್ತಾದರೂ ಈ ಬಾರಿ ಅತಿಯಾದ ಮಳೆಯಿಂದಾಗಿ ಪ್ರಸಕ್ತ ಸಾಲಿನಲ್ಲಿ 43,207 ರೈತರು 60,782 ಹೆಕ್ಟೇರ್ ಪ್ರದೇಶದಲ್ಲಿ ಎಫ್.ಸಿ.ವಿ. ತಂಬಾಕನ್ನು ಬೆಳೆಯಲಾಗಿದ್ದು. 59.78 ಮಿಲಿಯನ್ ಕೆ.ಜಿ.ಯಷ್ಟು ಮಾತ್ರ ಬೆಳೆ ನಿರೀಕ್ಷಿಸಲಾಗಿದ್ದು, ಇದರಿಂದ ನಿಗದಿತ ಗುರಿಗಿಂತ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಯಾಗಿರುವುದರಿಂದ ತಂಬಾಕು ಮಂಡಳಿಯು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ರಿಗೆ ಮನವರಿಕೆ ಮಾಡಿಕೊಟ್ಟ ಪರಿಣಾಮ ಹೆಚ್ಚುವರಿ ಸೇವಾ ಶುಲ್ಕಗಳನ್ನು ಮನ್ನಾ ಮಾಡಿ ಸಾಮಾನ್ಯವಾಗಿ ಅನ್ವಯವಾಗುವ ಸೇವಾ ಶುಲ್ಕದೊಂದಿಗೆ ತಂಬಾಕು ಮಂಡಳಿಯ ಹರಾಜು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ.
ಇದರಿಂದ ಮೊದಲೇ ಬೆಳೆ ನಷ್ಟದಿಂದ ಕಂಗಾಲಾಗಿರುವ ಬೆಳೆಗಾರರಿಗೆ ಆರ್ಥಿಕ ಹೊರೆ ತಗ್ಗಲಿದೆ ಎಂದು ತಿಳಿಸಿರುವ ಅವರು ಫೆ.21ರ ಬುಧವಾರದಿಂದ ಕಾರ್ಡ್ದಾರರಿಗೆ ಪಟ್ಟಾ ವಿತರಿಸಲಾಗುವುದು. ಅರ್ಜಿ ಪಡೆದ ನಂತರ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗುತ್ತದೆ.
ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಅವರು ತಂಬಾಕು ಬೆಳೆಗಾರರು ಅದರಲ್ಲೂ ಕಾರ್ಡ್ದಾರರಿಗೆ ಮಾರಾಟಕ್ಕೆ ಅನುಮತಿ ಸಿಗದ ಬಗ್ಗೆ ಸದನದಲ್ಲಿ ಗಮನ ಸೆಳೆದು ಸರಕಾರ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದರು. ಜತೆಗೆ ರೈತ ಪರ ಸಂಘಟನೆಗಳು ಹಾಗೂ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘ, ಕರ್ನಾಟಕ ರಾಜ್ಯ ತಂಬಾಕು ಬೆಳೆಗಾರರ ಹಿತರಕ್ಷಣಾ ಸಮಿತಿಯು ಸರಕಾರ ಹಾಗೂ ತಂಬಾಕು ಮಂಡಳಿ ಮೇಲೆ ಒತ್ತಡ ಹಾಕಿದ್ದರು.
ಇದೆಲ್ಲದರ ಪರಿಣಾಮ ಕೇಂದ್ರ ವಾಣಿಜ್ಯ ಮಂತ್ರಾಯಲವು ದಂಡ ರಹಿತವಾಗಿ ತಂಬಾಕು ಮಾರಾಟಕ್ಕೆ ಅನುಮತಿ ನೀಡಿದ್ದು, ಕೇಂದ್ರ ವಾಣಿಜ್ಯ ಮಂತ್ರಾಲಯದ ನಿರ್ಧಾರದಿಂದ ರಾಜ್ಯದ 16ಸಾವಿರ ಅನಧಿಕೃತ ಕಾರ್ಡ್ದಾರರಿಗೆ ಅನುಕೂಲವಾದಂತಾಗಿದೆ.