ಕೊಳ್ಳೇಗಾಲ: ಒಂದು ದೇಶದ ಸಾಂಸ್ಕೃತಿಕ ಪರಂಪರೆ ಅಲ್ಲಿ ವಾಸಿಸುವ ಜನರ ಜೀವಮಾನದ ಚಟುವಟಿಕೆಗಳನ್ನು ಸಂಪನ್ನಗೊಳಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ಮಂಡ್ಯ ಪಿಇಎಸ್ ಕಾಲೇಜಿನ ಇತಿಹಾಸ ಉಪನ್ಯಾಸಕ ಹಾಗೂ ಸುಗಮ ಸಂಗೀತ ಗಾಯಕ ಡೇವಿಡ್ ಪ್ರತಿಭಾಂಜಲಿ ಹೇಳಿದರು.
ಅವರು ಎಸ್, ವಿ. ಕೆ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಗಡಿ ಪ್ರದೇಶದ ಸವಾಲುಗಳು ಮತ್ತು ಸಾಂಸ್ಕೃತಿಕ ಅನನ್ಯತೆ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತ ರಾಷ್ಟ್ರವು ಬಹು ಸಂಸ್ಕೃತಿಯ ನಾಡಾದರೂ, ನಮ್ಮ ಗಡಿ ಪ್ರದೇಶದಲ್ಲಿ ವಿಭಿನ್ನ ರೀತಿಯ ಸಾಂಸ್ಕೃತಿಕ ಪರಂಪರೆಗಳು ಬಹಳ ಶ್ರೀಮಂತವಾಗಿವೆ. ಇಂತಹ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಆಶಯ ಭಾಷಣ ಮಾಡಿದ ಸಾಹಿತಿ ಬಾಗೂರು ಮಾರ್ಕಂಡಯ್ಯ, ನಮ್ಮ ಗಡಿನಾಡಿನ ಜಾನಪದ ಕಲೆಗಳು ಬಹಳ ಶ್ರೀಮಂತವಾಗಿವೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಮತ್ತು ಮಂಟೇಸ್ವಾಮಿ ಕಾವ್ಯಗಳು ಇಡೀ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿವೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕವಿ ಸಾಹಿತಿ ಹನುಸೋಗೆ ಸೋಮಶೇಖರ್ ಮಾತನಾಡಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಗಡಿ ಭಾಗದ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸ ವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಕೊಳ್ಳೇಗಾಲದಲ್ಲಿ ಮಾಡುತ್ತಿರುವುದು ಬಹಳ ಶ್ಲಾಘನೀಯ ಕಾರ್ಯ ಎಂದರು.
ಸಮಾರಂಭದಲ್ಲಿ ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ, ಅಂತರರಾಷ್ಟ್ರೀಯ ಜಾನಪದ ಗಾಯಕ ಸಿಎಂ ನರಸಿಂಹಮೂರ್ತಿ ಸಾಹಿತಿ ಮದ್ದೂರು ದೊರೆಸ್ವಾಮಿ ಮತ್ತು ಗಾಯಕ ಅರುಣ್ ಕುಮಾರ್ ಭಾಗವಹಿಸಿದ್ದರು.