ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ನೋಡಿರದ ಗ್ರಾಮೀಣ ಜನತೆಗೆ ದಸರಾ ವೀಕ್ಷಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಹಮ್ಮಿಕೊಂಡಿರುವ “ದಸರಾ ದರ್ಶನ” ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿದರು.
ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ 9 ತಾಲ್ಲೂಕಿನ ಮಹಿಳೆಯರು, ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಗ್ರಾಮೀಣ ಜನತೆಯನ್ನು ಕರೆತಂದು ದಸರಾವನ್ನು ದರ್ಶನ ಮಾಡಿಸುತ್ತಿರುವುದು ಉತ್ತಮ ಕಾರ್ಯ ಎಂದು ಹೇಳಿದರು.
3 ದಿನಗಳ ಕಾಲ ನಿಗಮದ 81 ವಾಹನಗಳಲ್ಲಿ ಸುಮಾರು 4455 ಜನತೆಯನ್ನು ಕರೆತಂದು ಅರಮನೆ, ಮೃಗಾಲಯ, ಜೆ.ಕೆ.ಗ್ರೌಂಡ್ಸ್ನಲ್ಲಿ ನಡೆಯುವ ಮಹಿಳಾ ಮತ್ತು ಮಕ್ಕಳ ದಸರಾ ವೀಕ್ಷಿಸಲು ಮತ್ತು ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ದಸರಾದಲ್ಲಿ ಆಕರ್ಷಣೆಯಾದ ದೀಪಾಲಂಕಾರವನ್ನು ತೋರಿಸಿ ನಂತರ ಅವರವರ ತಾಲ್ಲೂಕುಗಳಿಗೆ ಮರಳಿ ಬಿಡಲಾಗುತ್ತದೆ ಎಂದರು.
ದಸರಾ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನೆರವೇರಿಸಲು 21 ಸಮಿತಿಗಳನ್ನು ರಚಿಸಿದ್ದು, ಅವುಗಳ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಲಾಗಿದೆ. ಅವ್ಯವಸ್ಥೆ ಆಗದಂತೆ ಸಾರ್ವಜನಿಕರ ಸಲಹೆ ಸೂಚನೆ ಪಡೆದುಕೊಳ್ಳಲಾಗುತ್ತಿದೆ. ಅಧಿಕಾರಿಗಳ ಜೊತೆಗೆ ಅಧಿಕಾರೇತರರನ್ನು ಸೇರಿಸಿಕೊಂಡು ದಸರಾ ಯಶಸ್ವಿಗೊಳಿಸುವಂತೆ ಸೂಚಿಸಲಾಗಿದೆ. 2008 ರಿಂದ ದಸರಾ ದರ್ಶನ ಕಾರ್ಯಕ್ರಮ ನಡೆದುಕೊಂಡು ಬರುತ್ತಿದ್ದು, ಪ್ರತಿ ವಾಹನದಲ್ಲಿ ಒಬ್ಬ ಮೇಲ್ವಿಚಾರಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಮಂಗಳವಾರ ರಾತ್ರಿ ನಗರಪ್ರದಕ್ಷಿಣೆ ಮಾಡಿ ಸ್ವಚ್ಚತಾ ಕಾರ್ಯ ಪರಿಶೀಲನೆ ನಡೆಸಲಾಯಿತು. ಸ್ವಚ್ಚತಾ ಟೀಮ್ ಬೆಳಗ್ಗೆ 3 ಗಂಟೆಯವರೆಗೆ ಕೆಲಸ ಮಾಡುತ್ತಿದ್ದಾರೆ. ಆಹಾರ ಮೇಳಕ್ಕೆ 25 ರಿಂದ 30 ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದರು. ಯಾವುದೇ ಆಹಾರ ಪದಾರ್ಥ ವ್ಯರ್ಥವಾಗಿಲ್ಲ. ಅಂದಿನ ದಿನದ ಕಸವನ್ನು ಅಂದೇ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ರಾಮದಾಸ್, ನಾಗೇಂದ್ರ, ಉಪಮೇಯರ್ ರೂಪಾ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮೂಡಾ ಮಾಜಿ ಅಧ್ಯಕ್ಷ ರಾಜೀವ್, ಜಂಗಲ್ಸ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷ ಅಪ್ಪಣ್ಣ, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.