ಮೈಸೂರು: ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎನ್ನುವ ಡಿ.ಕೆ.ಶಿವಕುಮಾರ್ ಮೊದಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹ ತಡೆಯಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಸಿ.ಎನ್.ಮಂಜುನಾಥ್ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದಾರೋ, ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೋ ಎಂಬುದು ಮುಖ್ಯವಲ್ಲ. ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಒಂದಾಗಿದ್ದು, ಈಗ ಎರಡು ಒಂದೇ ಅಲ್ಲವೇ. ಹಾಗಾಗಿ, ಮಂಜುನಾಥ್ ಅವರು ಎಲ್ಲಿಂದ ನಿಂತರೆ ಏನು ಎಂದು ಪ್ರಶ್ನಿಸಿದರು.
ಮಂಜುನಾಥ್ರನ್ನು ಜೆಡಿಎಸ್ನಿಂದ ಸ್ಪರ್ಧೆ ಮಾಡಿಸದೇ, ಬಿಜೆಪಿಯಿಂದ ಸ್ಪರ್ಧೆ ಮಾಡಿಸಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಡಿಸಿಎಂ ಡಿಕೆಶಿ ಸುದ್ದಿಗಾರರಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುವ ಭೀತಿಯಿಂದ ಈಗಾಗಲೇ ಕುಕ್ಕರ್ ಹಂಚಿ, ಇವಾಗ ದುಡ್ಡು ಹಂಚುತ್ತಿದ್ದಾರೆ ಎಂದರು.
ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಸೋಲೋದು ಗ್ಯಾರಂಟಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಮಂಡ್ಯದ ಜನರು ನನಗೆ ಮಂಡ್ಯದಿಂದಲೇ ಸ್ಪರ್ಧಿಸುವಂತೆ ಒತ್ತಡ ಹಾಕಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ನಾನು ಮಂಡ್ಯಕ್ಕೆ ಹೊಸ ಮುಖವಲ್ಲ. ನಾನೊಬ್ಬ ಕನ್ನಡಿಗ, ರಾಜಕೀಯವಾಗಿ ನನಗೆ ಶಕ್ತಿ ತುಂಬೋದು ಮಂಡ್ಯ. ಇಲ್ಲಿ ನಾನು ಗೆಲ್ಲುತ್ತೇನೋ ಇಲ್ಲವೋ ಎಂದು ಜನರು ತೀರ್ಮಾನ ಮಾಡ್ತಾರೆ ಎಂದರು.
ಮುಖ್ಯಮಂತ್ರಿಯಾಗಿ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಯಾರ ಜೊತೆಗಿದ್ದವು? ಅವರ ಜತೆಯಲ್ಲೇ ಇದ್ದವು. ಮಂಡ್ಯದಲ್ಲಿ ನನ್ನ ಮಗ ಸೋಲಲು ಕಾಂಗ್ರೆಸ್ ಪಾಲು ಇಲ್ಲವೇ ಎಂದು ಪ್ರಶ್ನಿಸಿದ ಅವರು, ನೀವು ಈ ಹಿಂದೆ ಸಿಎಂ ಆಗಿ ಮೈಸೂರ ಗೆಲ್ಲಲಾಗಲಿಲ್ಲ. ಇವಾಗ ನಿಮ್ಮ ಮಾತಿಗೆ ಜನರು ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದರು.
ಮಂಡ್ಯ ಸೋಲು ಗೆಲುವಿನ ಬಗ್ಗೆ ಮತನಾಡುವ ಮುಖ್ಯಮಂತ್ರಿಗಳು, ಮಂಡ್ಯ ರೈತರ ಬಗ್ಗೆ ಸ್ವಲ್ಪವಾದರೂ ಯೋಚನೆ ಮಾಡಿದ್ದಾರಾ, ಕೆಆರ್ಎಸ್ ಜಲಾಶಯದಲ್ಲಿ ನೀರಿದ್ದರೂ ಅಲ್ಲಿನ ಜಾನುವಾರಿಗಳಿಗೆ ನೀರು ಕೊಡುತ್ತಿಲ್ಲ. ಆ ಭಾಗದ ಜನರು ನೀರಿಲ್ಲದೇ ಪರದಾಡುತ್ತಿದ್ದಾರೆ. ಹೀಗಿದ್ದರೂ ತಮಿಳುನಾಡಿಗೆ ಯಥೇಚ್ಛವಾಗಿ ನೀರು ಹರಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.