ಮೈಸೂರು: ಹೆಚ್.ಡಿ.ಕುಮಾರಸ್ವಾಮಿ ಅವರು ಗ್ಯಾರಂಟಿಗಳಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದರು. ತಮ್ಮ ಹೇಳಿಕೆಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. ಆದರೂ ಏಕೆ ಅದೇ ವಿಚಾರವನ್ನು ಮುಂದಿಟ್ಟುಕೊಂಡು ದೊಡ್ಡ ವಿವಾದ ಮಾಡುತ್ತಿದ್ದೀರಾ. ಈ ಹಿಂದೆ ಗರ್ಗೇಶ್ವರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯ ಸೆರಗು ಎಳೆದಿದ್ದು ಮರೆತು ಹೋಯಿತೆ? ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ ನೀವು ಮಾಡಿದ್ದು ಸರಿಯೇ? ಚುನಾವಣಾ ಉಸ್ತುವಾರಿ ರಣದೀಂಪ್ಸಿಂಗ್ ಸುರ್ಜೇವಾಲಾ ಹೇಮಾ ಮಾಲಿನಿಯವರ ಬಗ್ಗೆ ಮಾತನಾಡಿದ್ದು ಸರಿಯೇ? ಈ ಬಗ್ಗೆ ಕಾಂಗ್ರೆಸ್ ನಾಯಕರು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರ ರಚನೆಯಲ್ಲಿ ಡಿ.ಕೆ.ಶಿವಕುಮಾರ್ ಪಾತ್ರ ದೊಡ್ಡದಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಶ್ರಮ ಹೆಚ್ಚಿದೆ. ಹೈಕಮಾಂಡ್ ಮಟ್ಟದಲ್ಲೇ 50:50 ಅಧಿಕಾರ ಹಂಚಿಕೆಯಾಗಿದೆ. ಸಿದ್ದರಾಮಯ್ಯ ಸಿಎಂ ಸ್ಥಾನ ತ್ಯಜಿಸಬೇಕಾಗುತ್ತದೆ. ಅವರು ಖುರ್ಚಿ ಬಿಡದಿದ್ದರೆ ಡಿ.ಕೆ.ಶಿವಕುಮಾರ್ ಬಿಡುವುದಿಲ್ಲ. ಚುನಾವಣೆ ನಂತರ ಎಲ್ಲವೂ ತಿಳಿಯಲಿದೆ ಎಂದ ಅವರು, ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪಾಗುತ್ತಿದ್ದು, ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್ನಿಂದ ಬಂದ ನಾಯಕರಿಗೆ ಹೆಚ್ಚು ಮನ್ನಣೆ ಸಿಗುತ್ತಿದೆ ಎಂದರು.
ಗ್ಯಾರಂಟಿ ಜಾರಿಯಾದಾಗ ನಾನು ಅದನ್ನು ಹೊಗಳಿದ್ದೆ. ಆದರೆ, ಆರ್ಥಿಕ ವ್ಯವಸ್ಥೆ ಸುಭಿಕ್ಷವಾಗಿದ್ದಾಗ ನೀಡಬೇಕು. ಇಂದು ಒಬ್ಬರಿಗೆ ನೀಡಿ ಇನ್ನೊಬ್ಬರಿಂದ ಕಿತ್ತು ಕೊಳ್ಳಲಾಗುತ್ತಿದೆ. ಗಂಡನಿಂದ ಕಿತ್ತು ಹೆಂಡತಿಗೆ ನೀಡುತ್ತಿದ್ದಾರೆ. ಇದರಿಂದ ಮನೆಯಲ್ಲಿ ಗಂಡ ಹೆಂಡಿರ ಜಗಳ ಗ್ಯಾರಂಟಿಯಾಗಿದೆ. ಸಾಮಾಜಿಕ ವ್ಯವಸ್ಥೆ ಬುಡಮೇಲಾಗುತ್ತಿದೆ. ಬಿಯರ್, ವಿದ್ಯುತ್, ಬಸ್ ದರ ಸೇರಿದಂತೆ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದೆ.
ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಜನರ ಕಷ್ಟ ಸುಖ ಕೇಳುತ್ತಿಲ್ಲ. ಅಲ್ಲದೆ ಗ್ಯಾರಂಟಿಗಳು ಎಲ್ಲರಿಗೂ ತಲುಪುತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನದ ಕುರಿತು ಶ್ವೇತ ಪತ್ರ ಹೊರಡಿಸಬೇಕು. ಆಗ ಮಾತ್ರ ಎಷ್ಟು ಜನರಿಗೆ ಯೋಜನೆ ತಲುಪಿದೆ ಎಂದು ತಿಳಿಯುತ್ತದೆ. ಸಂಪನ್ಮೂಲ ಎಲ್ಲಿಂದ ತರುತ್ತೀರಿ? ಗ್ಯಾರಂಟಿ ಜಾರಿಯಾದ ಬಳಿಕ ಎಷ್ಟು ಸಂಪನ್ಮೂಲ ಹೆಚ್ಚಳವಾಗಿದೆ? ಜನರಿಗೆ ಎಷ್ಟು ಹೊರೆಯಾಗಿದೆ ಎಂಬುದನ್ನು ತಿಳಿಸಲಿ ಎಂದು ಒತ್ತಾಯಿಸಿದರು.