ಹನಗೋಡು: ನಾಗರಹೊಳೆ ಉದ್ಯಾನದಂಚಿನ ಹನಗೋಡು ಹೋಬಳಿಯ ದೊಡ್ಡಹೆಜ್ಜೂರಿನ ಶ್ರೀ ಆಂಜನೇಯಸ್ವಾಮಿ ದೇವಾಲಯದ ಪ್ರಾಣ ಪುನರ್ ಪ್ರತಿಷ್ಠಾಪನೆ ಮತ್ತು ನೂತನ ದೇವಾಲಯದ ಪ್ರಾರಂಭೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸುಮಾರು 700 ವರ್ಷಗಳ ಇತಿಹಾಸವಿರುವ ದೊಡ್ಡಹೆಜ್ಜೂರಿನ ಶ್ರೀ ಆಂಜನೇಯಸ್ವಾಮಿಯ ಪುರಾತನ ದೇವಾಲಯವನ್ನು ಸುಮಾರು ಒಂದು ಕೋಟಿಗೂ ಹೆಚ್ಚು ವೆಚ್ಚದಡಿ ನಿರ್ಮಿಸಿರುವ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆದ ವಿವಿಧ ಪೂಜಾ ಕೈಂಕರ್ಯಗಳು ನಡೆದವು, ಶುಕ್ರವಾರ ಮುಂಜಾನೆಯಿಂದಲೇ ಆದಿಚುಂಚನಗಿರಿ ಶಾಖಾಮಠದ ಸೋಮನಾಥಸ್ವಾಮೀಜಿ ಹಾಗೂ ಗಾವಡಗೆರೆಯ ನಟರಾಜಸ್ವಾಮೀಜಿಗಳ ಸಾನಿಧ್ಯದಲ್ಲಿ ದೇವಾಲಯದ ಆವರಣದಲ್ಲಿನ ನವಗ್ರಹ, ಅರಳಿಕಟ್ಟೆ, ಗರುಡಗಂಭ ಹಾಗೂ ದೇವಾಲಯದ ಗೋಪುರ ಉದ್ಘಾಟನೆ ನಡೆಯಿತು. ಶಾಸಕ ಜಿ.ಟಿದೇವೇಗೌಡರು ಮಂಜಾನೆಯೇ ಭೇಟಿ ನೀಡಿ ದೇವರ ದರ್ಶನ ಪಡೆದರು.
ನಂತರ ದೇವಾಲಯದ ಜಾತ್ರಾಮಾಳದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ಗೌಡ ಮಾತನಾಡಿ ಸುತ್ತಮುತ್ತಲ 16 ಹಳ್ಳಿಗರು ಸೇರಿ ಐತಿಹ್ಯವುಳ್ಳ ಈ ದೇವಾಲಯವನ್ನು ಸುಂದರವಾಗಿ ನಿರ್ಮಿಸಿಕೊಂಡಿದ್ದು, ಅರಣ್ಯದಂಚಿನಲ್ಲಿರುವ ಈ ದೇವಾಲಯಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು, ನಮ್ಮೆಲ್ಲ ಶುಭಕಾರ್ಯಗಳು ಇಲ್ಲಿಂದಲೇ ಆರಂಭಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಆದಿಚುಂಚನಗಿರಿ ಮೈಸೂರು ಶಾಖಮಠದ ಶ್ರೀ ಸೋಮನಾಥಸ್ವಾಮಿ ಆಶೀರ್ವಚನ ನೀಡಿ, ಈ ಭಾಗದ ಜನರ ಆರಾಧ್ಯ ದೈವ ಶ್ರೀ ರಾಮ ಆಂಜನೇಯಸ್ವಾಮಿಗೆ ಭವ್ಯ ದೇವಾಲಯ ನಿರ್ಮಿಸಿರುವುದು ಹೆಮ್ಮೆ ಇದೊಂದು ಯಾತ್ರಾಸ್ಥಳವಾಗಲಿದೆ ಎಂದರು.
ಗಾವಡಗೆರೆ ಮಠದ ಶ್ರೀ ನಟರಾಜಸ್ವಾಮೀಜಿ ಮಾತನಾಡಿ ಈ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದ್ದು, ದೇವಾಲಯದ ಪುನರ್ ನಿರ್ಮಾಣದಲ್ಲಿ ಶಾಸಕರಾದ ಮಂಜುನಾಥ್, ಜಿ.ಟಿ.ದೇವೇಗೌಡರು ಸೇರಿದಂತೆ ಅನೇಕ ದಾನಿಗಳ ನೆರವಿನಿಂದ ಸುಂದರ ದೇವಾಲಯ ನಿರ್ಮಾಣಗೊಂಡಿದ್ದು, ಇದೊಂದು ಪುಣ್ಯ ಕ್ಷೇತ್ರವಾಗಲಿ. ಭಕ್ತರು ಇಲ್ಲಿಗೆ ಆಗಾಗ್ಗೆ ಭೇಟಿ ನೀಡುವ ಮೂಲಕ ನಿರ್ಮಲ ಭಕ್ತಿ ಇರಲೆಂದು ಆಶಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಶೇಖರೇಗೌಡ ಗ್ರಾ.ಪಂ.ಅಧ್ಯಕ್ಷ ಸುಭಾಷ್, ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಮುಖಂಡ ರವಿ, ಸಮಿತಿ ಪದಾಧಿಕಾರಿಗಳಾದ ರಾಮಚಂದ್ರ, ನಟರಾಜ್, ನಾಗೇಶ್, ರಾಮಕೃಷ್ಣೇಗೌಡ, ಮಹದೇವಣ್ಣ, ಮಾದೇಗೌಡ, ದೊಡ್ಡಹೆಜ್ಜೂರು ಸೊಸೈಟಿ ಅಧ್ಯಕ್ಷ ಚಂದ್ರಶೇಖರ್, ಹನಗೋಡು ಸೊಸೈಟಿ ಅಧ್ಯಕ್ಷ ಹನುಮ, ಯ.ರಾಮೇಗೌಡ, ಯ.ನಂಜಯ್ಯ, ಉದ್ಯಮಿ ಅನಿಲ್, ಬನ್ನಿಕುಪ್ಪೆಕೂಸಪ್ಪ ಸೇರಿದಂತೆ ಅನೇಕರಿದ್ದರು. ಐದು ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಭಾಗವಹಿಸಿದ್ದರು.
ಸಂಜೆ ದೊಡ್ಡಹೆಜ್ಜೂರು ಆಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಿದ ಶಾಸಕ ಎಚ್.ಪಿ. ಮಂಜುನಾಥರನ್ನು ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ಬರಮಾಡಿಕೊಂಡರು. ಶಾಸಕರು ವಿಶೇಷ ಪೂಜೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು. ಈ ವೇಳೆ ದೇವಾಲಯ ಸಮಿತಿ ಅಧ್ಯಕ್ಷ ಶೇಖರೇಗೌಡ, ಕಾರ್ಯದರ್ಶಿ ನಟರಾಜ್, ಮುಖಂಡರಾದ ಕಸ್ತೂರಿಗೌಡ, ಗಣೇಶ್, ಶಿವಕುಮಾರ್, ರಾಜುಶಿವರಾಜೇಗೌಡ, ಬಸವಣ್ಣ, ಸಾವರ್, ಮಂಜು, ವಿಜಯ್, ಹರೀಶ್, ಗೌರಮ್ಮ ಸೇರಿದಂತೆ ಅನೇಕರಿದ್ದರು.