ನಂಜನಗೂಡು: ಬದುಕಿರುವ ವ್ಯಕ್ತಿಗಳಿಗೆ ಮರಣ ಪತ್ರ ನೀಡಿದ ಪ್ರಕರಣ ಮಾಸುವ ಮುನ್ನವೇ ಈಗ ನಂಜನಗೂಡಿನ ಹಳೇ ತಾಲ್ಲೂಕು ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕರ ಕಛೇರಿಯಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ.
ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ರೈತರೊಬ್ಬರು ಪೌತಿ ಖಾತೆ ಮಾಡಿಸುವ ಸಲುವಾಗಿ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ರೈತರಿಗೆ ಪೌತಿಖಾತೆ ಮಾಡಲು ಪ್ರಮುಖವಾಗಿ ಗ್ರಾಮಕ್ಕೆ ತೆರಳಿ ಗ್ರಾಮ ಲೆಕ್ಕಾಧಿಕಾರಿ ಗ್ರಾಮಸ್ಥರಿಂದ ಮಹಜರು ನಡೆಸುವುದು ಕಂದಾಯ ಇಲಾಖೆಯ ನಿಯಮವಾಗಿದೆ. ಸಿಂಧುವಳ್ಳಿ ಗ್ರಾಮಕ್ಕೆ ತೆರಳಿದ ಗ್ರಾಮ ಲೆಕ್ಕಾಧಿಕಾರಿ ವಿನಯ್ ಗೌಡ ಎಂಬುವರು ಇಬ್ಬರು ಗ್ರಾಮದ ವ್ಯಕ್ತಿಗಳ ನಕಲು ಸಹಿ ಮಾಡಿ ಈಗ ವಿವಾದ ಸೃಷ್ಟಿಸಿಕೊಂಡಿರುವ ಘಟನೆ ನಡೆದಿದೆ.
ಗ್ರಾಮದ ಗಿರೀಶ್ ಮತ್ತು ಜಯಶಂಕರಪ್ಪ ಎಂಬ ಇಬ್ಬರು ವ್ಯಕ್ತಿಗಳ ಸಹಿಯನ್ನು ನಕಲು ಮಾಡಿ ಮಹಜರು ಪತ್ರದಲ್ಲಿ ಪೋರ್ಜರಿ ಸಹಿ ಮಾಡಿರುವ ವಿಚಾರವನ್ನು ತಿಳಿದು ಇಂದು ಕಛೇರಿಯ ಮುಂಭಾಗದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮತ್ತು ತಾಲ್ಲೂಕು ಅಧ್ಯಕ್ಷ ಸತೀಶ್ ನೇತೃತ್ವದಲ್ಲಿ ದಿಡೀರ್ ಪ್ರತಿಭಟನೆ ನಡೆಸಿ, ಗ್ರಾಮ ಲೆಕ್ಕಾಧಿಕಾರಿ ವಿನಯ್ ಗೌಡ ಎಂಬುವರನ್ನು ಕೂಡಲೇ ಅಮಾನತು ಪಡಿಸಬೇಕು ಎಂದು ಆಗ್ರಹಿಸಿದರು.
ವಿಚಾರ ತಿಳಿದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಪರಿಶೀಲನೆ ನಡೆಸಿ ತಪ್ಪಿತಸ್ಥ ಗ್ರಾಮ ಲೆಕ್ಕಾಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ತಹಶೀಲ್ದಾರ್ ಭರವಸೆ ನೀಡಿದರು.
ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದು ಪ್ರತಿಭಟನೆಯನ್ನು ರೈತರು ಕೈಬಿಟ್ಟಿದ್ದಾರೆ. ಸ್ಥಳದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ತಾಲ್ಲೂಕು ಅಧ್ಯಕ್ಷ ಸತೀಶ್ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ಶೈಲಜಾ ಸೇರಿದಂತೆ ರೈತರು ಭಾಗವಹಿಸಿದ್ದರು.