ನಂಜನಗೂಡು: ತಾಲ್ಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ವಿದ್ಯುತ್ ತಂತಿ ಕಟ್ಟಾಗಿ ಬಿದ್ದು ಹಸು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಗ್ರಾಮದ ಪುಟ್ಟಮ್ಮ ಎಂಬ ವೃದ್ಧೆ ತಮ್ಮ ಜಮೀನಿನಲ್ಲಿ ಇಂದು ಶನಿವಾರ ಹಸುವನ್ನು ಮೇಯಿಸುತ್ತಿದ್ದ ವೇಳೆ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಕಟ್ಟಾಗಿ ಹಸುವಿನ ಮೇಲೆ ಬಿದ್ದಿದೆ. ಈ ವೇಳೆ ಹಸು ಸ್ಥಳದಲ್ಲಿಯೇ ಸಾವನ್ನಪ್ಪಿದೆ ಎನ್ನಲಾಗಿದೆ. ವೃದ್ಧೆ ಪುಟ್ಟಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ದೊಡ್ಡಕವಲಂದೆ ಹೋಬಳಿ ಘಟಕದ ಅಧ್ಯಕ್ಷ ಮಲ್ಲಹಳ್ಳಿ ರವಿ ಭೇಟಿ ನೀಡಿದ್ದಾರೆ.
ವಿದ್ಯುತ್ ತಂತಿ ಸರಿಪಡಿಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಸದ್ಯ ಜನರು ಯಾರು ಬಂದಿಲ್ಲ, ಜನ ಸಾಮಾನ್ಯರ ಮೇಲೆ ವಿದ್ಯುತ್ ತಂತಿ ಬಿದ್ದಿದ್ದರೆ ಸಾವು ನೋವು ಸಂಭವಿಸುತ್ತಿತ್ತು. ಅದೃಷ್ಟವಶಾತ್ ಪುಟ್ಟಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಸು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು. ವಿದ್ಯುತ್ ತಂತಿಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.