ಹೈದರಾಬಾದ್: ಮಹಿಳಾ ಉದ್ಯಮಿಯೊಬ್ಬಳು ತನಗೆ ಮ್ಯಾಟ್ರಿಮೋನಿ ಸೈಟ್ನಲ್ಲಿ ಪರಿಚಯವಾದ ಟಿವಿ ನಿರೂಪಕನಿಗೆ ಮದುವೆ ಪ್ರಸ್ತಾಪ ಮಾಡಿದ್ದು ಇದನ್ನ ಆತ ತಿರಸ್ಕರಿಸಿದನೆಂದು ಆತನನ್ನು ಅಪಹರಿಸಲು ಹೋಗಿ ಬಂಧನವಾದ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಭೋಗಿರೆಡ್ಡಿ ತ್ರಿಶಾ ಎಂದು ಗುರುತಿಸಲಾಗಿದೆ. ಆಕೆ ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿ ಎಂದು ತಿಳಿದು ಬಂದಿದೆ. ತ್ರಿಶಾ ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಟಿವಿ ಆಂಕರ್ ಪ್ರಣವ್ ಎಂಬವರ ಪ್ರೊಫೈಲ್ ನೋಡಿ ಮದುವೆ ಪ್ರಸ್ತಾಪ ಮಾಡಿದ್ದಳು. ಈ ಪ್ರಸ್ತಾಪಕ್ಕೆ ಪ್ರಣವ್ ಕಡೆಯಿಂದಲೂ ಒಪ್ಪಿಗೆ ಸಿಕ್ಕಿತ್ತು. ಇದಾದ ಬಳಿಕ ಚಾಟಿಂಗ್ ಆರಂಭಿಸಿ ಹಲವು ತಿಂಗಳ ಬಳಿಕ ಅದು ನಕಲಿ ಪ್ರೊಫೈಲ್ ಎಂದು ತ್ರಿಶಾಗೆ ತಿಳಿದಿದೆ.
ಇದಾದ ಬಳಿಕ ಆಕೆ ಪ್ರಣವ್ ಅವರ ನಿಜವಾದ ಮೊಬೈಲ್ ನಂಬರ್ ಪಡೆದು ನಡೆದ ವಿಚಾರವನ್ನು ಹೇಳಿಕೊಡಿದ್ದಳು. ಅಲ್ಲದೇ ಮದುವೆ ವಿಚಾರ ಪ್ರಸ್ತಾಪಿಸಿದ್ದಳು. ಇದಕ್ಕೆ ಪ್ರಣವ್ ಒಪ್ಪಿರಲಿಲ್ಲ. ಇದರಿಂದ ಬೇಸತ್ತ ತ್ರಿಶಾ ಸ್ನೇಹಿತರ ಸಹಾಯದಿಂದ ಪ್ರಣವ್ ಅವರನ್ನು ಹುಡುಕಿ ಅಪಹರಿಸಿದ್ದಳು. ನಂತರ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಪ್ರಣವ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೀಗ ತ್ರಿಶಾ ಹಾಗೂ ಆಕೆಯ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.