ಪಿರಿಯಾಪಟ್ಟಣ: ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಮಹದೇಶ್ವರ ದೇವಾಲಯದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಮೂಲಕ ಚಾಲನೆ ದೊರೆಯಿತು.
ದೀಪಾವಳಿ ಹಬ್ಬದ ಸಂದರ್ಭ ನಾಲ್ಕು ದಿನ ಜಾತ್ರಾ ಮಹೋತ್ಸವ ಜರಗುವುದು ಇಲ್ಲಿನ ವಿಶೇಷವಾಗಿದೆ, ಜಾತ್ರಾ ಮಹೋತ್ಸವ ಅಂಗವಾಗಿ ದೇವಾಲಯ ಆವರಣ ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳಿದು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ದೇವಾಲಯ ಆವರಣದಲ್ಲಿ ಮಕ್ಕಳ ಆಟಿಕೆ ಹಾಗೂ ಗೃಹೋಪಯೋಗಿ ವಸ್ತು ಮಳಿಗೆ ತೆರೆಯಲಾಗಿದೆ. ರಥೋತ್ಸವ ದಿನ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಅನ್ನಸಂತರ್ಪಣೆ ನಡೆಸಲು ಶಾಮಿಯಾನ ಹಾಗೂ ಸರತಿ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿದೆ.
ನ.12 ರಂದು ಸ್ವಾಮಿಯು ಮಠದಿಂದ ಉದ್ಭವ ಸ್ಥಾನಕ್ಕೆ ಮಂಗಳವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ಹೊರಟು ರಾತ್ರಿ ಎಣ್ಣೆ ಮಜ್ಜನ ನಡೆದು ಬಳಿಕ ಪ್ರಸಾದ ವಿನಿಯೋಗ ನಡೆಯಿತು. 13 ರ ಸೋಮವಾರ ಸ್ವಾಮಿಗೆ ಚಿಣ್ಣರಿಂದ ಹಾಲು ಹರವಿ ಸೇವೆ ನಡೆದು ಸಾಯಂಕಾಲ ಸರ್ವ ಮತಸ್ಥರಿಗು ಸಂತರ್ಪಣೆ ಜರುಗಿತು. 14 ರ ಮಂಗಳವಾರ ಸಾಯಂಕಾಲ ಅಗ್ನಿಕೊಂಡ ಸರ್ವ ಮತಸ್ಥರಿಗೂ ಸಂತರ್ಪಣೆ, 15 ರ ಬುಧವಾರ ಸ್ವಾಮಿಗೆ ಪಾನಕ ಪೂಜೆ ಬಳಿಕ ಪ್ರಸಾದ ವಿನಿಯೋಗ ಸಾಯಂಕಾಲ 5 ಗಂಟೆಗೆ ಸಕಲ ವಿಜೃಂಭಣೆಯಿಂದ ಊರಿನ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.
ಜಾತ್ರೆ ಯಶಸ್ಸಿಗಾಗಿ ದೇವಾಲಯ ಆವರಣದಲ್ಲಿ ಮಹದೇಶ್ವರ ಸ್ವಾಮಿ ಭಕ್ತ ಮಂಡಳಿಯಿಂದ ಸಕಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪಿರಿಯಾಪಟ್ಟಣ ಪೊಲೀಸರು ಇನ್ಸ್ಪೆಕ್ಟರ್ ಕೆ.ವಿ ಶ್ರೀಧರ್ ಅವರ ನೇತೃತ್ವದಲ್ಲಿ ಬಂದೋಬಸ್ತ್ ಗಾಗಿ ದೇವಾಲಯ ಆವರಣ ಸುತ್ತ ಬ್ಯಾರಿಕೇಡ್ ಗಳನ್ನು ಇರಿಸಿ ವಾಹನ ಹಾಗೂ ಸಾರ್ವಜನಿಕರ ಸುಗಮ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.