ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಗಜಪಡೆ ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆ.21ರಂದು ಗಜಪಯಣ ನಡೆಸುವ ಸಾಧ್ಯತೆ ಇದ್ದು, ಸೋಮವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ದಸರಾ ಉನ್ನತ ಸಮಿತಿ ಸಭೆಯಲ್ಲಿ ಅಧಿಕೃತ ಘೋಷಣೆ ಸಾಧ್ಯತೆಯಿದೆ.
ಜಂಬೂಸವಾರಿಯ ರೂವಾರಿಗಳಾದ ಗಜಪಡೆಯನ್ನು ದಸರಾಗೆ ಎರಡು ತಿಂಗಳು ಮುಂಚಿತವಾಗಿ ಕರೆತರಲಾಗುತ್ತದೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಸರಾ ಆಚರಣೆ ಮತ್ತು ಗಜಪಯಣ ಸಂಬಂಧ ಸೋಮವಾರ ಸಂಜೆ 4ಗಂಟೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದ್ದು, ಈ ವೇಳೆ ಗಜಪಯಣ ದಿನ ಮತ್ತು ಅಂದು ಕರೆತರುವ ಆನೆಗಳ ಬಗ್ಗೆ ಮಾಹಿತಿ ಹೊರ ಬೀಳಲಿದೆ.
ಈಗಾಗಲೇ ದಸರಾ ಉತ್ಸವಕ್ಕೆ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 14ಆನೆಗಳನ್ನು ಕರೆತರಲು ನಿರ್ಧರಿಸಿರುವ ಅರಣ್ಯ ಇಲಾಖೆ, ಮತ್ತಿಗೋಡು, ದುಬಾರೆ, ರಾಂಪುರ ಹಾಗೂ ಬಳ್ಳೆ ಸಾಕಾನೆ ಶಿಬಿರಗಳಿಗೆ ತೆರಳಿ ಒಂದು ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆಸಿದೆ. ಜತೆಗೆ ಗಜಪಯಣದ ಮೂಲಕ ಮೈಸೂರಿಗೆ ಕರೆತರುವ ಮೊದಲ ತಂಡದ ಆನೆಗಳ ಪಟ್ಟಿ ಸಿದ್ಧಪಡಿಸಿದೆ.
ಅ.24ರಂದು ದಸರಾ ಜಂಬೂ ಸವಾರಿ ನಡೆಯಲಿದ್ದು, ಅದಕ್ಕಾಗಿ ಗಜಪಡೆಯನ್ನು ತಯಾರಿ ಮಾಡುವ ಸಲುವಾಗಿ ಎರಡು ತಿಂಗಳ ಮುಂಚೆಯೇ ಮೈಸೂರಿಗೆ ಕರೆತರುವುದು ವಾಡಿಕೆ. ಅದರಂತೆ ಈ ಬಾರಿಯೂ ಆಗಸ್ಟ್ ಕೊನೆಯ ವಾರ ಅಂದರೆ 21ರ ಸೋಮವಾರದಂದು ನಾಗರಹೊಳೆ ಉದ್ಯಾನದಂಚಿನಲ್ಲಿರುವ ವೀರನಹೊಸಹಳ್ಳಿಯಲ್ಲಿ ಗಜಪಯಣ ನಡೆಸುವ ಮೂಲಕ 6ರಿಂದ 8ಆನೆಗಳ ಮೊದಲ ತಂಡವನ್ನು ಕರೆತರಲು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಅಂದು ವೀರನಹೊಸಹಳ್ಳಿಯಿಂದ ಬರುವ ಗಜಪಡೆಯ ಮೊದಲ ತಂಡ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ 3 ದಿನಗಳ ಕಾಲ ತಂಗಲಿವೆ. ಈ ಬಾರಿಯ ದಸರಾ ಮಹೋತ್ಸವ ಅ.15ರಿಂದ ಆರಂಭವಾಗಲಿದ್ದು, ಅ.24ರಂದು ಜಂಬೂಸವಾರಿ ನೆರವೇರಲಿದೆ. ಈ ಹಿನ್ನೆಲೆ ಸಾಕಾನೆ ಶಿಬಿರಗಳಿಂದ 50 ದಿನಗಳ ಮುನ್ನವೇ ಆನೆಗಳನ್ನು ಮೈಸೂರಿಗೆ ತರಲಿದ್ದಾರೆ.