ಮೈಸೂರು: ಮೈಸೂರು ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಈ ಬಾರಿ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಅ.15 ರಿಂದ 22ರವರೆಗೆ ಆಹಾರ ಮೇಳ ಹಮ್ಮಿಕೊಳ್ಳಲಾಗಿದೆ.
ಲಲಿತಮಹಲ್ ಪ್ಯಾಲೇಸ್ ಪಕ್ಕದ ಮುಡಾ ಮೈದಾನದಲ್ಲಿ ಕಳೆದ ವರ್ಷ ನಡೆಸಲಾಗಿತ್ತಾದರೂ ಈ ಬಾರಿ ಒಂದೇ ಕಡೆ ಅಂದರೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮಾತ್ರ ಆಹಾರ ಮೇಳ ನಡೆಸಲಾಗುತ್ತಿದೆ. ಆಹಾರ ಮೇಳದಲ್ಲಿ ಈ ಬಾರಿ ವಿಶೇಷವಾಗಿ ಚೈನೀಸ್, ಇಟಾಲಿಯನ್, ಫ್ರೆಂಚ್ ಹಾಗೂ ಆಫ್ರಿಕನ್ ಶೈಲಿಯ ವಿಭಿನ್ನ ತಿನಿಸುಗಳನ್ನು ಪರಿಚಯಿಸಲು ಸಿದ್ಧತೆ ನಡೆಯುತ್ತಿದೆ. ಎಲ್ಲ ವರ್ಗದ ಜನರ ಅಭಿರುಚಿ ಗಮನದಲ್ಲಿರಿಸಿಕೊಂಡು ವೈವಿಧ್ಯಮಯವಾಗಿಸಲು ಉದ್ದೇಶಿಸಲಾಗಿದೆ.
ಇನ್ನು ಸಹಜ, ನೈಸರ್ಗಿಕ, ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧ್ಯಾನಗಳು, ಹಣ್ಣು-ಹಂಪಲು, ತರಕಾರಿ, ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳನ್ನು ಉಣಬಡಿಸಲು ಚಿಂತನೆ ನಡೆದಿದ್ದು, ಇದರ ಜತೆಗೆ ಅಡುಗೆ ಹಾಗೂ ಭೋಜನ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಯೂ ನಡೆಯಲಿದೆ. ಮಹಿಳೆಯರು ಮತ್ತು ಮಕ್ಕಳಿಗೆ ನಾನಾ ತಿನಿಸು ತಿನ್ನುವ ಸ್ಪರ್ಧೆ, ಮಹಿಳೆಯರಗೆ ಸ್ಥಳದಲ್ಲೇ ಅಡುಗೆ ತಯಾರಿಸುವ ಸ್ಪರ್ಧೆ, ವಿಶೇಷವಾಗಿ ದಂಪತಿಗಳನ್ನು ಕೇಂದ್ರೀಕರಿಸಿ ಸ್ಪರ್ಧೆ ಆಯೋಜಿಸಲು ಚರ್ಚೆಗಳು ದಸರಾ ಸಮಿತಿ ಚಿಂತನೆ ಮಾಡಿದೆ.
140ಕ್ಕೂ ಮಳಿಗೆಗಳಿಗೆ ಅವಕಾಶ ನೀಡಲಾಗುತ್ತಿದ್ದು, ಹೋಟೆಲ್, ರೆಸ್ಟೋರೆಂಟ್, ಬೇಕರಿ ಹಾಗೂ ನಾನಾ ಬಗೆಯ ಆಹಾರ ತಯಾರಕರಿಂದ ಮಳಿಗೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಆಸಕ್ತರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.