ನಂಜನಗೂಡು: ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ನೋವು ದುಃಖ ದುಮ್ಮಾನಗಳ ನಡುವೆಯೇ ಮುಖಂಡರನ್ನು ಭೇಟಿ ಮಾಡಿ ದರ್ಶನ್ ಧ್ರುವನಾರಾಯಣ್ ಮತಪ್ರಚಾರ ನಡೆಸಿದರು.
ಪಟ್ಟಣದ ವೈಕೆಎಲ್ ಸ್ವಾಮಿ ಬಡಾವಣೆಯಲ್ಲಿರುವ ವಕೀಲ ಹಂಬಳೆ ಪ್ರಕಾಶ್ ಅವರ ಮನೆಗೆ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಭೇಟಿ ನೀಡಿದರು.
ಒಂದೇ ತಿಂಗಳಲ್ಲಿ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ನೋವಿನಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ದ್ರುವನಾರಾಯಣ್ ಗೆ ವಕೀಲರು, ರೈತ ಸಂಘ ಹಾಗೂ ಸ್ಥಳೀಯ ವೀರಶೈವ ಮುಖಂಡರು ನೈತಿಕ ಬೆಂಬಲ ನೀಡುವ ಮೂಲಕ ಅವರಿಗೆ ಧೈರ್ಯ ತುಂಬಿದರು.
ಮನೆಗೆ ಬಂದ ಅವರನ್ನು ಮಾಲಾರ್ಪಣೆ ಮಾಡಿ ಸ್ವಾಗತಿಸಿದ ವಕೀಲ ಹಂಬಳೆ ಪ್ರಕಾಶ್, ನೇರ ನಡೆ-ನುಡಿ ಹಾಗೂ ಅಭಿವೃದ್ಧಿ ಹರಿಕಾರಾಗಿದ್ದ ದಿವಂಗತ ದ್ರವ ನಾರಾಯಣ್ ಅವರ ತದ್ರೂಪವಾಗಿರುವ ದರ್ಶನ್ ಧ್ರುವನಾರಾಯಣ್ ಅವರಂತಹ ಸರಳ ಸಜ್ಜನಿಕೆ ವ್ಯಕ್ತಿ ಈ ಕ್ಷೇತ್ರಕ್ಕೆ ಬೇಕು. ಹೀಗಾಗಿ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ ನೀವು ನೋವಿನಲ್ಲಿ ಇದ್ದೀರಿ ನಿಜ. ನಿಮ್ಮ ಬದಲಿಗೆ ನಾವೇ ಮನೆಮನೆಗೆ ತೆರಳಿ ಪ್ರಚಾರ ಮಾಡುವ ಮೂಲಕ ನಿಮ್ಮ ಗೆಲುವಿಗೆ ನಮ್ಮ ಸಂಘಟನೆಯ ಮುಖಾಂತರ ಸಾತ್ ನೀಡುತ್ತೇವೆ ಎಂದರು.
ಲಿಂಗಾಯಿತ ವೀರಶೈವ ಮುಖಂಡರಾದ ನಿವೃತ್ತ ಪ್ರಾಧ್ಯಾಪಕರಾದ ರಾಜಶೇಖರ್ ಹಾಗೂ ಅನುರಾಗ ಮಕ್ಕಳ ಮನೆಯ ಸೋಮಶೇಖರ್ ಮಾತನಾಡಿ ಧ್ರುವನಾರಾಯಣರಂತೆಯೇ ದರ್ಶನ್ ಕೂಡ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು ಇಂಥವರ ಅವಶ್ಯಕತೆ ಈ ಕ್ಷೇತ್ರಕ್ಕೆ ಇದೆ. ದರ್ಶನ್ ಧ್ರುವನಾರಾಯಣ್ ಅವರಿಗೆ ಅತ್ಯಧಿಕ ಮತಗಳನ್ನು ಕೊಡಿಸುವ ಮೂಲಕ ಅವರ ಗೆಲುವಿಗೆ ಪ್ರಮುಖ ಪಾತ್ರ ವಹಿಸುತ್ತೇವೆ ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಟ್ಟಿ ಮಹೇಶ್ ಶಂಕರ್ ವಕೀಲ ಸೋಮಣ್ಣ, ಹಂಬಳೆ ಚಂದ್ರಪ್ಪ ಬಸವಯೋಗಿ ಪ್ರಭು, ಚನ್ನಪ್ಪ, ಸಂತೋಷ್, ಶಿವಪಾದು, ಸಂಗರಾಜು, ರವಿಕುಮಾರ್, ರಘು ಸೇರಿದಂತೆ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದರು.