ಮೈಸೂರು: ಗಜಪಯಣ ಸೆ.1ರಂದು ನಡೆಯುತ್ತಿದ್ದು, ದಸರಾ ಜಂಬೂಸವಾರಿಗೆ ಆಗಮಿಸಲಿರುವ ಗಜಪಡೆಗಳ ವಾಸ್ತವ್ಯಕ್ಕೆ ಅರಮನೆ ಆವರಣದಲ್ಲಿ ಶೆಡ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
ಹುಣಸೂರು ಬಳಿಯ ವೀರನಹೊಸಹಳ್ಳಿಯಿಂದ ಸೆ.1ರಂದು ಗಜ ಪಯಣ ನಡೆಯುತ್ತಿದ್ದು, ಅಂಬಾರಿ ಆನೆ ಅಭಿಮನ್ಯು ನೇತೃತ್ವದ 9 ಆನೆಗಳ ತಂಡ ಅರಣ್ಯ ಭವನದಲ್ಲಿ ಬೀಡು ಬಿಡಲಿವೆ. ಬಳಿಕ ಸೆ.4ರಂದು ಸಾಂಪ್ರದಾಯಿಕವಾಗಿ ವಿಖ್ಯಾತ ಮೈಸೂರು ಅರಮನೆ ಆವರಣ ಪ್ರವೇಶಿಸಲಿದ್ದು, ಇವುಗಳಿಗೆ ಅನುಕೂಲವಾಗುವಂತೆ ಅರಮನೆ ಆವರಣದಲ್ಲಿ ತಾತ್ಕಾಲಿಕ ಶೆಡ್ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಶೆಡ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.
ಸದ್ಯ ಮೊದಲ ತಂಡದಲ್ಲಿ ಒಂಬತ್ತು ಆನೆಗಳು ಆಗಮಿಸಲಿದ್ದು, ಎರಡನೇ ತಂಡದಲ್ಲಿ ಐದು ಆನೆಗಳು ಆಗಮಿಸಲಿವೆ. ಆನೆಗಳ ಜೊತೆಗೆ ಮಾವುತರು, ಕಾವಾಡಿಗಳು ಕೂಡ ಬರಲಿದ್ದಾರೆ. ದಸರಾ ಮಹೋತ್ಸವಕ್ಕೆ ಆಗಮಿಸುವ ಗಜಪಡೆಗಳ ಆಗಮನಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿವೆ ಎಂದು ಡಿಸಿಎಫ್ ಸೌರಭ್ಕುಮಾರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಬಾರಿ ದಸರಾದಲ್ಲಿ ಭಾಗವಹಿಸಿದ್ದ ಎಂಟು ಆನೆಗಳು ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ. ಹೊಸದಾಗಿ 3 ಆನೆಗಳು ಈ ಬಾರಿಯ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ. ಮೊದಲ ಮತ್ತು ಎರಡನೇ ಹಂತದಲ್ಲಿ ಯಾವ ಯಾವ ಆನೆಗಳು ಬರಲಿವೆ ಎಂಬ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಬಂಡೀಪುರದ ರಾಂಪುರ, ನಾಗರಹೊಳೆಯ ದುಬಾರೆ, ಮತ್ತಿಕಟ್ಟೆ ಆನೆ ಶಿಬಿರಾಗಳಿಂದ ಗಜ ಪಡೆಯ ಆಯ್ಕೆ ಪ್ರಕ್ರಿಯೆ ನಡೆದಿದ್ದು, ದಸರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲ ಹೆಣ್ಣು ಆನೆಗಳ ಗರ್ಭ ಪರೀಕ್ಷೆಯೂ ನಡೆದಿದೆ. ಗರ್ಭ ಧರಿಸಿದ ಆನೆಗಳನ್ನೂ ಕರೆತರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.