ನವದೆಹಲಿ: ಆಗಸ್ಟ್ -23 ಅಂದರೆ ನಾಳೆ ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ. 40 ದಿನಗಳಿಂದ ಇಡೀ ಭಾರತವೇ ಚಾತಕ ಪಕ್ಷಿಯಂತೆ ಎದುರು ನೋಡುತ್ತ ಕುಳಿತಿದೆ. ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿರುವ ವಿಕ್ರಮ್ ಲ್ಯಾಂಡರ್ ಇನ್ನೇನಿದ್ದರೂ ಚಂದ್ರನ ಮೇಲೆ ಕಾಲು ಇಡೋದೊಂದೇ ಬಾಕಿ. ಈ ಐತಿಹಾಸಿಕ ಕ್ಷಣಕ್ಕಾಗಿ ಇಡೀ ವಿಶ್ವವೇ ಭಾರತದತ್ತ ಕಣ್ಣರಳಿಸಿ ನೋಡುತ್ತಿದೆ.
ಸದ್ಯ ಚಂದ್ರನ ಮೇಲ್ಮೈನ 25 ಕಿ.ಮೀ. ದೂರದಲ್ಲಿರುವ ವಿಕ್ರಮ್ ಲ್ಯಾಂಡರ್ಅನ್ನು ಸುರಕ್ಷಿತವಾಗಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಮಾಡಿಸಲು ಇಸ್ರೋ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಒಂದು ವೇಳೆ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ನ ಲ್ಯಾಂಡಿಂಗ್ಗೆ ಪೂರಕ ವಾತಾವರಣ ಇರದಿದ್ದರೆ, ಆಗಸ್ಟ್ 27 ರಂದು ಮರಳಿ ಪ್ರಯತ್ನ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು ಅದರ ಸ್ಥಿತಿಗತಿ ಪರಿಶೀಲಿಸಲಾಗವುದು. ಈ ವೇಳೆ ಲ್ಯಾಡಿಂಗ್ ಮಾಡಬೇಕೇ ಅಥವಾ ಆ ಕ್ಷಣದಲ್ಲಿ ಸೂಕ್ತವಲ್ಲವೇ ಎಂದು ತೀರ್ಮಾನ ಕೈಗೊಳ್ಳಲಾಗುವುದು.
ಅನುಕೂಲಕರ ಪರಿಸ್ಥಿತಿ ಇಲ್ಲದಿದ್ದರೆ ಆಗಸ್ಟ್ 27ಕ್ಕೆ ಮುಂದೂಡಿಕೆ ಮಾಡಿ ಮತ್ತೊಂದು ಪ್ರಯತ್ನ ಮಾಡಲಾಗುವುದು ಎಂದು ಇಸ್ರೋದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ಎಂ ದೇಸಾಯಿ ತಿಳಿಸಿದ್ದಾರೆ.