ಮೈಸೂರು: ಜಿಲ್ಲೆಯ ತಾಲೂಕು ಕೇಂದ್ರ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಟತ್ರೆಯಲ್ಲಿ ಸೇವೆ ಒದಗಿಸುತ್ತಿದ್ದ 108 ಆಂಬುಲೆನ್ಸ್ ಕೆಟ್ಟು ಹೋಗಿ ಒಂದೂವರೆ ತಿಂಗಳಾದರೂ ದುರಸ್ತಿ ಮಾಡದ ಕಾರಣ ಸುತ್ತಮುತ್ತಲ ರೋಗಿಗಳು ಆಂಬುಲೆನ್ಸ್ ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಎಚ್.ಡಿ.ಕೋಟೆ ಆಸ್ಪತ್ರೆಗೆ ಕಾಡಂಚಿನ ಗ್ರಾಮ ಸೇರಿದಂತೆ ದೂರದ ಊರುಗಳಿಂದ ಬಡ ರೋಗಿಗಳ ತುರ್ತು ಸಂದರ್ಭದಲ್ಲಿ 108 ಆಂಬುಲೆನ್ಸ್ ನ ಅಗತ್ಯತೆಯಿದೆ. ಆದರೆ ಕಳೆದ ಒಂದೂವರೆ ತಿಂಗಳಿನಿಂದ ರೋಗಿಗಳಿಗೆ ಲಭ್ಯವಾಗದ ಕಾರಣ ಹಿಡಿಶಾಪ ಹಾಕುವಂತಾಗಿದೆ. ಸರಗೂರು ಸಮುದಾಯ ಆರೋಗ್ಯ ಕೇಂದ್ರ, ಅಂತರಸಂತೆ ಹಾಗೂ ಹಂಪಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜಿವಿಕೆ ಪೌಂಡೇಷನ್ನಿಂದ ನಾಲ್ಕು 108 ತುರ್ತು ವಾಹನಗಳು ತುರ್ತು ಸೇವೆ ನೀಡುತ್ತಿವೆ. ಆದರೆ ತಾಲೂಕು ಆಸ್ಪತ್ರೆಯ ಜಡ್ಡುಗಟ್ಟಿದ ದುರಾಡಳಿತ, ವ್ಯವಸ್ಥೆಯಿಂದಾಗಿ ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿಯೇ ಆಂಬುಲೆನ್ಸ್ ಇಲ್ಲದಂತಾಗಿದೆ.
ಈ ಬಗ್ಗೆ ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರೆ ವಾಹನ ಕೆಟ್ಟಿದೆ ನಿಜ, ವಾಹನ ಬಿಡಿಭಾಗಗಳನ್ನು ಬಾಂಬೆಯಿಂದ ತರಿಸಬೇಕು. ಬೇಗ ಕೊಡಿ ಎಂದು ಜಿವಿಕೆ ಸಂಸ್ಥೆಯವರಿಗೆ ಮನವಿ ಮಾಡಿದ್ದೇವೆ. ಈಗ ಬೇರೆ ಆಸ್ಪತ್ರೆಗಳಲ್ಲಿರುವ 3 ವಾಹನಗಳನ್ನು ತುರ್ತು ಸೇವೆಗೆ ಕರೆಯಿಸಿಕೊಳ್ಳುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಕೊರೊನಾ ಹೊಸ ರೂಪಾಂತರಿ ಜೆಎನ್1 ಸೋಂಕು ನೆರೆಯ ಕೇರಳ ಮತ್ತು ತಮಿಳುನಾಡಿನಲ್ಲಿ ಆರ್ಭಟಿಸುತ್ತಿದೆ.
ಎಚ್.ಡಿ.ಕೋಟೆ ತಾಲೂಕು ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಇಲ್ಲಿನ ಗಡಿಭಾಗದ ಜನರು ಈಗಾಗಲೇ ಜರ್ಜರಿತರಾಗಿದ್ದಾರೆ, ಜೊತೆಗೆ ತಾಲೂಕು ಭೌಗೊಳಿಕವಾಗಿ ತುಂಬಾ ದೊಡ್ಡ ವಿಸ್ತೀರ್ಣ ಹೊಂದಿರುವುದರಿಂದ ಗಡಿಭಾಗ ಮತ್ತು ಕಾಂಡಚಿನ ಗ್ರಾಮಗಳನ್ನು ತಲುಪಬೇಕಾದರೆ 40 ರಿಂದ 50 ಕಿ.ಮೀ ಕ್ರಮಿಸಬೇಕಿದೆ.
ಇನ್ನಾದರೂ ತಾಲೂಕು ಆಡಳಿತ ಮತ್ತು ತಾಲೂಕು ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿ 108 ಅಂಬ್ಯಲೆನ್ಸ್ ವಾಹನ ದುರಸ್ತಿ ಜತೆಗೆ ಅಗತ್ಯ ಔಷಧ ಒದಗಿಸುವ ಕೆಲಸವನ್ನು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.