ಮೈಸೂರು: ಒಂದು ಉದ್ದೇಶ, ಒಂದು ಓಟ ಎಂಬ ಥೀಮ್ನೊಂದಿಗೆ ಶಾಂತಿ ಮತ್ತು ಅಹಿಂಸೆಗಾಗಿ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಏರ್ಪಡಿಸಿದ್ದ ಅಹಿಂಸ ರನ್ ಎರಡನೇ ಆವೃತ್ತಿಯ ಮ್ಯಾರಥಾನ್ ನಗರದಲ್ಲಿ ನಡೆಯುವುದರೊಂದಿಗೆ ಎಲ್ಲರ ಗಮನಸೆಳೆಯಿತು.
ನಗರದ ಅರಮನೆಯ ಬಳಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ ಅಹಿಂಸಾ ರನ್ಗೆ ಎಲ್ಲ ವಯೋಮಾನದ ನೂರಾರು ಉತ್ಸಾಹಿಗಳು ಭಾಗವಹಿಸಿ ಅಹಿಂಸಾ ತತ್ವ ಸಾರಿದರು.
ಬಿಗ್ ಬಾಸ್ 10ನೇ ಆವೃತ್ತಿಯಲ್ಲಿ ವಿಜೇತ ಕಾರ್ತಿಕ್ ಮಹೇಶ್ ಹಸಿರು ನಿಶಾನೆ ತೋರುವ ಮೂಲಕ ಮ್ಯಾರಥಾನ್ ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಆಯೋಜಿಸಿರುವ ಈ ಕಾರ್ಯಕ್ರಮ ಅಹಿಂಸೆ ಮತ್ತು ಸಾಮರಸ್ಯದ ಮನೋಭಾವ ಬಿಂಬಿಸುತ್ತದೆ. ಈ ರೀತಿಯ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ದೇಹವನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ. ಸಮತೋಲನ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ದೈಹಿಕ ಅಥವಾ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ನಾನು ಮೂಲತಃ ಮೈಸೂರಿನವನಾಗಿದ್ದು, ಇಂತಹ ಮ್ಯಾರಥಾನ್ಗಳಲ್ಲಿ ಭಾಗವಹಿಸಲು ಕುಕ್ಕರಹಳ್ಳಿ ಕೆರೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ ಎಂದು ತಮ್ಮ ಹಿಂದಿನ ಚಟುವಟಿಕೆ ದಿನಗಳನ್ನು ನೆನಪಿಸಿಕೊಂಡರು. ಅಹಿಂಸಾ ರನ್ಗೂ ಮುನ್ನ ಸ್ಪರ್ಧಾಳುಗಳು ವಾರ್ಮ್ ಅಪ್ ವ್ಯಾಯಾಮವಾಗಿ ಜುಂಬಾ ನೃತ್ಯ ಪ್ರದರ್ಶಿಸಿದರು. ನಂತರ ಓಟವನ್ನು 3 ವಿಭಾಗಗಳಲ್ಲಿ ನಡೆಸಲಾಯಿತು (10 ಕಿಮೀ, 5 ಕಿಮೀ ಮತ್ತು 3 ಕಿಮೀ), 10 ಕಿಮೀ ಓಟಕ್ಕೆ ಮೊದಲ ಬಹುಮಾನವಾಗಿ 10 ಸಾವಿರ, ದ್ವಿತೀಯ 7 ಸಾವಿರ ಮತ್ತು ತೃತೀಯ ಬಹುಮಾನವಾಗಿ 5 ಸಾವಿರ ನೀಡಲಾಯಿತು.
5 ಕಿಮೀ ಓಟಕ್ಕೆ ಪ್ರಥಮ ಬಹುಮಾನವಾಗಿ 7 ಸಾವಿರ ಎರಡನೇ ಬಹುಮಾನ 5 ಸಾವಿರ ಮತ್ತು ತೃತೀಯ ಬಹುಮಾನ 3 ಸಾವಿರ, 3 ಕಿಮೀ ಓಟಕ್ಕೆ ಪ್ರಥಮ ಬಹುಮಾನ 5 ಸಾವಿರ, ದ್ವಿತೀಯ ಬಹುಮಾನ 3 ಸಾವಿರ ಮತ್ತು ತೃತೀಯ ಬಹುಮಾನ 2 ಸಾವಿರ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ನ ಮೈಸೂರು ಚಾಪ್ಟರ್ ಅಧ್ಯಕ್ಷ ಕಾಂತಿಲಾಲ್ ಎಸ್.ಜೈನ್, ಮುಖ್ಯ ಕಾರ್ಯದರ್ಶಿ ಗೌತಮ್ ಸಾಲೇಚಾ, ಮಹಿಳಾ ವಿಭಾಗದ ಅಧ್ಯಕ್ಷೆ ಮೋನಾ ಭತೇವ್ರಾ, ಮುಖ್ಯ ಕಾರ್ಯದರ್ಶಿ ರಜನಿ ದಗಲ್ಲಾಯ, ಸಂಚಾಲಕಿ ಸಪ್ನಾ ಗಾಂಧಿ, ಸಹ ಸಂಚಾಲಕಿ ಸರಿತಾ ಬಾಗ್ಮಾರ್ ಮೈಸೂರು ಯುವ ಘಟಕದ ಅಧ್ಯಕ್ಷ ಶ್ರೀ ಶ್ರೀಮಾಲ್, ಮುಖ್ಯ ಕಾರ್ಯದರ್ಶಿ ಅನ್ಮೋಲ್ ಶ್ರೀಶ್ರೀಮಾಲ್ ಮತ್ತಿತರರು ಉಪಸ್ಥಿತರಿದ್ದರು.