ಕೆ.ಆರ್.ಪೇಟೆ: ಮೈಸೂರು ಮಲ್ಲಿಗೆಯ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿರವರ ತವರೂರು ಕಿಕ್ಕೇರಿಗೆ ಭೇಟಿ ನೀಡುವವರನ್ನು ಇದೀಗ ಎಲ್ಲೆಡೆ ರಾಶಿ ಬಿದ್ದಿರುವ ಕಸಗಳು ಸ್ವಾಗತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ತಮ್ಮ ಜೀವಿತಾವಧಿಯ ಹೆಚ್ಚಿನ ಕಾಲವನ್ನು ಮೈಸೂರಿನಲ್ಲಿ ಕಳೆದಿದ್ದರೂ ಇವತ್ತಿಗೂ ಅವರ ಹುಟ್ಟೂರು ಕಿಕ್ಕೇರಿ ಬಗ್ಗೆ ಜನರಿಗೆ ಹೆಚ್ಚಿನ ಒಲವಿದೆ. ಹೀಗಾಗಿ ಕವಿಯ ಹೆಸರು ಬಂದಾಗಲೆಲ್ಲ ಕಿಕ್ಕೇರಿ ಎಲ್ಲರ ಗಮನಸೆಳೆಯುತ್ತದೆ. ಇಂತಹ ಕಿಕ್ಕೇರಿ ಇವತ್ತು ರಾಶಿ ಬಿದ್ದ ಕಸದಿಂದ ಸುದ್ದಿಯಾಗುತ್ತಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.
ಕಿಕ್ಕೇರಿ ಪಟ್ಟಣದ ಮೈಸೂರು ಮುಖ್ಯ ರಸ್ತೆಯಲ್ಲಿರುವ ಕೃಷಿ ಮಾರುಕಟ್ಟೆ ಎದುರು ಕಸದ ರಾಶಿ ಶೇಖರಣೆಯಾಗಿದ್ದು ಇದರಿಂದ ದಿನನಿತ್ಯ ಓಡಾಡುವ ವಾಹನಗಳ ಸವಾರರ ಮೇಲೆ ಪ್ಲಾಸ್ಟಿಕ್, ಕೋಳಿತುಪ್ಪಟ ಸೇರಿದಂತೆ ಇತರೆ ತ್ಯಾಜ್ಯ ಗಾಳಿಯಲ್ಲಿ ತೂರಿ ಬರುವುದು ಮಾಮೂಲಿಯಾಗಿದೆ. ಇಲ್ಲಿನ ಗ್ರಾಮ ಪಂಚಾಯಿತಿ ಆಡಳಿತ ಕಸ ವಿಲೇವಾರಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಕಾರಣದಿಂದಾಗಿ ಇಂತಹ ಪರಿಸ್ಥಿತಿ ತಲೆದೋರಿರುವುದಾಗಿ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ತಾಲ್ಲೂಕಿನಲ್ಲೇ ಕಿಕ್ಕೇರಿ ಗ್ರಾಮ ಪಂಚಾಯಿತಿಯು ಮೇಲ್ನೋಟಕ್ಕೆ ಅಭಿವೃದ್ಧಿಯಾಗಿದ್ದು ವಾರ್ಷಿಕ ಲಕ್ಷಾಂತರ ರೂಪಾಯಿಗಳು ಆದಾಯ ಇರುವ ಗ್ರಾಮ ಪಂಚಾಯಿತಿ ಆಗಿದೆ. ಆದರೆ ಇಲ್ಲಿ ಕೆಲಸ ಮಾಡುವ ಗ್ರಾಮ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸುವಾಸನೆಯಿಂದ ಕಂಪಿಸಬೇಕಾದ ಪ್ರೇಮ ಕವಿಯ ತವರೂರು ಕಿಕ್ಕೇರಿ ಪಟ್ಟಣವು ದುರ್ವಾಸನೆಯಿಂದ ಕೂಡಿ ಜನರನ್ನು ಸ್ವಾಗತಿಸುವಂತಾಗಿದೆ.
ಈ ಬಗ್ಗೆ ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿಗಾವಹಿಸಿ ಕೂಡಲೇ ರಸ್ತೆ ಬದಿಯಲ್ಲಿರುವ ಕಸವನ್ನು ವಿಲೇವಾರಿಗೊಳಿಸಿ ಊರಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಆಗ್ರಹಿಸಲಾಗುತ್ತಿದೆ.