ನಂಜನಗೂಡು: ಜ.14 ರಂದು ನಂಜನಗೂಡಿನಲ್ಲಿ 205ನೇ ಭೀಮಾ ಕೋರೆಂಗಾವ್ ವಿಜಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚುಂಚನಹಳ್ಳಿ, ಮಲ್ಲೇಶ್ ಹೇಳಿದರು.
ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ನಂಜನಗೂಡು ಪಟ್ಟಣದಲ್ಲಿ 205ನೇ ಭೀಮ ಕೋರೆಂಗಾವ್ ವಿಜಯೋತ್ಸವದ ಅಂಗವಾಗಿ ಪ್ರಬುದ್ಧ ಭಾರತ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನದ ಸಂರಕ್ಷಣೆ ಜಾಗೃತಿ ಸಮಾವೇಶವನ್ನು ಜ. 14ರಂದು ಶನಿವಾರ ನಂಜನಗೂಡಿನ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಬಹಿರಂಗ ಸಭೆಯನ್ನು ಆಯೋಜನೆ ಮಾಡಲಾಗಿದೆ.
ಭೀಮ ಕೋರೆಂಗಾವ್ ದಲಿತರ ಸ್ವಾಭಿಮಾನದ ಹೋರಾಟವಾಗಿದೆ. ಇದರ ಸ್ಫೂರ್ತಿಯಾಗಿ ಸಂತೋಷದ ದಿನವನ್ನಾಗಿ ಈ ವರ್ಷವೂ ಆಚರಣೆ ಮಾಡಲಾಗುತ್ತಿದ್ದು, ಸುಮಾರು 3 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಅಂದು ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿಯವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನಂತರ ಮೆರವಣಿಗೆಯಲ್ಲಿ ಐದು ಕಲಾತಂಡಗಳು ಭಾಗವಹಿಸಲಿದ್ದು, ಭೀಮ ಕೋರೆಂಗಾವ್ ಸ್ತಬ್ದ ಚಿತ್ರವು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂದೇಶವನ್ನು ನೀಡುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಂಕರ್ ಪುರ ಸುರೇಶ್, ಉಪಾಧ್ಯಕ್ಷ ಅಭಿನಾಗಭೂಷಣ್, ಒಕ್ಕೂಟದ ಪದಾಧಿಕಾರಿಗಳಾದ ಕಾರ್ಯ ಬಸವಣ್ಣ ಮಲ್ಲಹಳ್ಳಿ ನಾರಾಯಣ್, ನಗರ್ಲೆ ಎಂ. ವಿಜಯಕುಮಾರ್, ಕಳಲೆ ಕುಮಾರ್, ಗೋಷ್ಠಿಯಲ್ಲಿ ಹಾಜರಿದ್ದರು.