ಹಾಸನ: ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕಳ್ಳಿಮುದ್ದನಹಳ್ಳಿ ಯುವಕರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಫೋಟೋ ಹಿಡಿದು ಅಯ್ಯಪ್ಪಸ್ವಾಮಿ ದರ್ಶನ ಪಡದಿದ್ದಾರೆ.
ಈ ವೇಳೆ ದೇವೇಗೌಡರಿಗೆ ಆಯಸ್ಸು ಆರೋಗ್ಯ ಕರುಣಿಸುವ ಜೊತೆಗೆ, ಅವರ ಮಗ ಎಚ್.ಡಿ. ಕುಮಾರಸ್ವಾಮಿ ಅವರು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಭಿಮಾನಿಗಳೆಂದರೇ ಹಾಗೆ ತಮಗೆ ತೋಚಿದ್ದನ್ನು ಈಡೇರಿಸುವಂತೆ ವಿವಿಧ ಪ್ರಯತ್ನಗಳನ್ನು ಮಾಡುವುದನ್ನು ನೋಡಿದ್ದೇವೆ. ಇನ್ನು ಸಿನಿಮಾ, ರಾಜಕೀಯ, ಕ್ರೀಡೆ ಸೇರಿ ಅನೇಕ ಸಾಧಕರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರ ಮೇಲಿನ ಅಭಿಮಾಕ್ಕಾಗಿ ಹರಕೆ, ಸೇವೆ ಹಾಗೂ ಪ್ರಾಣವನ್ನೂ ಅರ್ಪಣೆ ಮಾಡಿದ್ದನ್ನು ನಾವು ನೋಡಿದ್ದೇವೆ. ಇವರನ್ನು ಹುಚ್ಚು ಅಭಿಮಾನಿಗಳು ಎಂದು ಕೂಡ ಕರೆಯುತ್ತೇವೆ. ಇತ್ತೀಚೆಗೆ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಉಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತರಹೇವಾರಿ ಮಾಲೆಗಳನ್ನು ಹಾಕುವ ಮೂಲಕ ಏಷ್ಯಾ ರೆಕಾರ್ಡ್ ಕೂಡ ದಾಖಲಾಗಿದೆ.
ಈಗ ಮಾಜಿ ಪ್ರಧಾನಿಗಳ ಭಾವಚಿತ್ರವನ್ನು ಹಿಡಿದುಕೊಂಡು ಅಯ್ಯಪ್ಪಸ್ವಾಮಿ ದರ್ಶನ ಮಾಡಿದ್ದಾರೆ. ಜಾಗ್ವಾರ್ ಬಾಯ್ಸ್ ತಂಡದಿಂದ ದರ್ಶನ: ಇನ್ನು ಪ್ರತಿವರ್ಷ ಚಳಿಗಾಲದಲ್ಲಿ ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ಅಯ್ಯಪ್ಪಸ್ವಾಮಿ ಮಾಲೆಯನ್ನು ಧರಿಸಿ ಹರಕೆ ಹೊತ್ತಾರೆ. ಮಕರ ಸಂಕ್ರಮಣ ಅವಧಿಗೂ ಮುನ್ನ ಒಂದು ದಿನವನ್ನು ನಿಗದಿ ಮಾಡಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿ ಬಂದು ಹರಕೆಯನ್ನು ತೀರಿಸುತ್ತಾರೆ. ಹೀಗೆ, ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕಳ್ಳಿಮುದ್ದನಹಳ್ಳಿಯ ಜಾಗ್ವಾರ್ ಬಾಯ್ಸ್ನ ಯುವಕರ ತಂಡದ ಸದಸ್ಯರು ತಾವು ಅಯ್ಯಪ್ಪ ಮಾಲೆ ಧರಿಸಿ ಇಂತಿಷ್ಟು ದಿನಗಳ ಕಾಲ ಕಠಿಣ ವ್ರತವನ್ನು ಆಚರಣೆ ಮಾಡಿದ್ದಾರೆ. ಇತ್ತೀಚೆಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆಂದು ತೆರಳಿದಾಗ ಪಂಪದಿಂದ ಅಯ್ಯಪ್ಪನ ಸನ್ನಿದಿಯವರೆಗು ಎಚ್.ಡಿ.ದೇವೇಗೌಡರ ಫೋಟೋ ಹಿಡಿದು ಪಾದಯಾತ್ರೆ ಮಾಡಿದ್ದಾರೆ. ನಂತರ ಫೋಟೋ ಹಿಡಿದುಕೊಂಡೇ ದೇವರ ದರ್ಶನ ಮಾಡಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಲೆಂದು ವಿಶೇಷ ಪೂಜೆ ಸಲ್ಲಿಕೆ: ಕನ್ನಡನಾಡಿನ ಏಕೈಕ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರಿಗೆ ಆರೋಗ್ಯ ಮತ್ತು ಆಯಸ್ಸು ನೀಡಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ. ನಂತರ ದೇವೇಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರು ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತಗಳನ್ನು ಪಡೆದು ಗೆದ್ದು, ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಯುವಕರ ತಂಡದ ಕಾರ್ಯಕ್ಕೆ ಜೆಡಿಎಸ್ಗೆ ಕಾರ್ಯಕರ್ತರು ಮತ್ತು ನಾಯಕರಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.