ಪಿರಿಯಾಪಟ್ಟಣ: ಇಲ್ಲಿನ ಮನೆಯೊಂದರಲ್ಲಿ ಸಂಭವಿಸಬಹುದಾಗಿದ್ದ ಭಾರೀ ಅಗ್ನಿ ಅನಾಹುತವನ್ನು ಅಗ್ನಿಶಾಮಕ ಸಿಬ್ಬಂದಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಿರಿಯಾಪಟ್ಟಣದ ಟ್ಯಾಂಕ್ ಬಡಾವಣೆಯ ನಿವಾಸಿ ಇರ್ಷಾದ್ ಬಾನು ಎಂಬುವರು ಮನೆಯ ಮಹಡಿಯ ಮೇಲೆ ಸಂಗ್ರಹಿಸಿದ್ದ ತೆಂಗಿನ ಕಾಯಿಮಟ್ಟೆಗೆ ಸ್ನಾನದಮನೆಯ ಹೊಗೆ ಪೈಪಿನಿಂದ ಬಂದ ಬೆಂಕಿ ತಗುಲಿದ್ದು ಅದು ಹೊತ್ತಿ ಉರಿಯುವ ಮೂಲಕ ಸಂಭವಿಸಬಹುದಾದ ಭಾರೀ ಅನಾಹುತವನ್ನು ಸಕಾಲದಲ್ಲಿ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ತಪ್ಪಿಸಿದ್ದಾರೆ.
ಇರ್ಷಾದ್ ಬಾನು ತಮ್ಮ ಆರ್ ಸಿಸಿ ಮನೆಯ ಮೇಲೆ ತೆಂಗಿನ ಕಾಯಿ ಮಟ್ಟೆ ಸಂಗ್ರಹಿಸಿಟ್ಟಿದ್ದರು. ಸ್ನಾನದ ಮನೆಯಲ್ಲಿ ಬಿಸಿ ನೀರು ಕಾಯಿಸಲು ಹಾಕಿದ್ದ ಬೆಂಕಿಯ ಬಿಸಿಗೆ ಹೊಗೆಯ ಪೈಪ್ ಪಕ್ಕದಲ್ಲಿದ್ದ ಮಟ್ಟೆಗೆ ಬೆಂಕಿ ತಗುಲಿದೆ ಇದರಿಂದ ಸಂಗ್ರಹಿಸಿದ್ದ ಕಾಯಿ ಮಟ್ಟೆ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಕೂಡಲೇ ಸ್ಥಳೀಯರು ಪಟ್ಟಣದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂಧ ಠಾಣಾಧಿಕಾರಿ ಅಜಯ್ ಕುಮಾರ್, ಸಿಬ್ಬಂದಿ ರಮೇಶ್, ಮಂಜುನಾಥ್, ಚಂದ್ರಶೇಖರ್ ಅವರು ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ.