ಮೈಸೂರು: ಚಲನಚಿತ್ರಗಳು ಸುಖಾಸುಮ್ಮನೆ ಫ್ಯಾನ್ ಇಂಡಿಯಾ ಆಗುವುದಿಲ್ಲ. ತುಂಬಾ ಚೆನ್ನಾಗಿದ್ದರೆ ಜನರು ಸ್ವೀಕಾರ ಮಾಡುತ್ತಾರೆ. ಆಗ ಯಶಸ್ಸು ಸಿಗುತ್ತದೆ ಎಂದು ನಿರ್ದೇಶಕ ಪ್ರೇಮ್ ಹೇಳಿದರು.
ಭಾನುವಾರ ಬೆಳಿಗ್ಗೆ ಕೆವಿಎನ್ ಲಾಂಛನದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಸಿನಿಮಾಕ್ಕೆ ಚಾಮುಂಡಿಬೆಟ್ಟದಲ್ಲಿ ನಡೆದ ಮುಹೂರ್ತದಲ್ಲಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ, ಮೊದಲ ದೃಶ್ಯವನ್ನು ಸೆರೆ ಹಿಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು
ಪ್ರೇಮ್ ಮಾತನಾಡಿ 1970ರ ಅಸುಪಾಸು ನಡೆದಿರುವ ಬೆಂಗಳೂರು ಭೂಗತ ಜಗತ್ತಿನ ಕತೆ ಹೇಳಲು ಹೊರಟಿದ್ದೇವೆ. ಆ ಸಮಯದಲ್ಲಿ ನಡೆದಂತಹ ಘಟನೆಗಳನ್ನು ಆಧಾರಿಸಿ ಸಿನಿಮಾ ಮಾಡಲಾಗುತ್ತಿದೆ. ಇದಕ್ಕಾಗಿ ಧ್ರುವ ಸರ್ಜಾ ಅವರನ್ನು ರೆಟ್ರೋ ಲುಕ್ನಲ್ಲಿ ಕಾಣುವಂತೆ ತಯಾರಿ ಮಾಡಲಾಗುತ್ತಿದೆ. ಈಗಾಗಲೇ 9 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಇನ್ನೂ ಐದಾರು ಕೆಜಿ ಕಮ್ಮಿಯಾಗಬೇಕಾಗಿದೆ. ತದನಂತರ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡುತ್ತೇವೆ. ಅದಾದ ಬಳಿಕ ಚಿತ್ರದ ಎಲ್ಲ ಮಾಹಿತಿಯನ್ನು ನೀಡಲಾಗುತ್ತದೆ.
ಏಪ್ರಿಲ್ 24 ಅಪ್ಪಾಜಿ ಡಾ.ರಾಜ್ಕುಮಾರ್ ಹುಟ್ಟುಹಬ್ಬ. ಇವತ್ತೇ ಸಿನಿಮಾ ಮುಹೂರ್ತ ಮಾಡಬೇಕು ಎಂಬುದು ಮೊದಲಿಂದ ನಿರ್ಧಾರ ಆಗಿತ್ತು. ಬೆಂಗಳೂರು ಅಂದು ಹೇಗಿತ್ತು ಎಂಬುದನ್ನು 3ಡಿ ಆಯಾಮದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿನಿಮಾಕ್ಕಾಗಿ ಎರಡು ಕಡೆ ಬೃಹತ್ ಸೆಟ್ ಹಾಕಲಾಗುತ್ತದೆ. ಅಂದಿನ ಬೆಂಗಳೂರನ್ನು ಮರುಸೃಷ್ಟಿ ಮಾಡಲಾಗುತ್ತದೆ. ತ್ರಿಬಲ್ ಆರ್, ಕೆಜಿಎಫ್ ಸಿನಿಮಾಗಳು ಮೇಕಿಂಗ್ನಲ್ಲಿ, ಕಥೆಯಲ್ಲಿ ವಿಭಿನ್ನವಾಗಿ ಇದ್ದ ಕಾರಣಕ್ಕಾಗಿಯೇ ಫ್ಯಾನ್ ಇಂಡಿಯಾ ಸಿನಿಮಾವಾದವು ಎಂದು ವಿಶ್ಲೇಷಣೆ ಮಾಡಿದರು.
ಧ್ರುವ ಸರ್ಜಾ ಮಾತನಾಡಿ ಚಾಮುಂಡಿ ಬೆಟ್ಟದಲ್ಲಿ ಚಿತ್ರದ ಮುಹೂರ್ತ ಆಗಿದ್ದು ಬಹಳ ಸಂತೋಷ ಆಗಿದೆ. ಇಡೀ ಚಿತ್ರತಂಡ ನಿರ್ಧಾರ ಮಾಡಿ ಬೆಟ್ಟದಲ್ಲಿ ಮುಹೂರ್ತ ಮಾಡಿದ್ದೇವೆ. ಜೂನ್ ತಿಂಗಳಲ್ಲಿ ಚಿತ್ರೀಕರಣ ಆರಂಭ ಆಗುತ್ತದೆ. ಪ್ರೇಮ್ ಅವರು ಆ್ಯಕ್ಷನ್ ಜೊತೆಗೆ ಕೌಟುಂಬಿಕ ಎಳೆಯನ್ನು ಬ್ಲೆಂಡ್ ಮಾಡಿ ಕಥೆ ಹೆಣೆದಿದ್ದಾರೆ. ಚಿತ್ರದ ಟೈಟಲ್, ಹೀರೋಯಿನ್ ಮುಂತಾದ ವಿಚಾರಗಳ ಬಗ್ಗೆ ನಾನೇನು ಹೇಳಲ್ಲ. ಏನನ್ನೂ ಹೇಳಬೇಡಿ ಕುತೂಹಲ ಉಳಿಸಿಕೊಂಡಿರಿ, ಚಿತ್ರದ ಮೊದಲ ನೋಟ ಲಾಂಚ್ ಆಗುವ ತನಕ ಯಾವ ವಿಷಯವನ್ನು ಹೇಳಬೇಡಿ ಎಂದು ನಿರ್ದೇಶಕರು ಕಟ್ಟಪ್ಪಣೆ ಮಾಡಿದ್ದಾರೆ ಎಂದು ಪ್ರೇಮ್ ಕಡೆಗೆ ಕೈ ತೋರಿಸಿದರು.
ಚಿತ್ರದ ನಿರ್ಮಾಪಕ ನಿಶಾ ವೆಂಕಟ್ ಕೋನಂಕಿ ಮಾತನಾಡಿ, ಈ ಚಿತ್ರವು ಹೊಸದೊಂದು ಅಧ್ಯಾಯ ಬರೆಯಲಿದೆ. ಹಾಡುಗಳು ಚನ್ನಾಗಿ ಮೂಡಿಬಂದಿವೆ. ಆದರೆ ಅವುಗಳನ್ನು ಈಗಲೇ ವೈರಲ್ ಮಾಡುವುದಿಲ್ಲ ಎಂದರು.