ಮೈಸೂರು : ಕರ್ನಾಟಕದ ಮೊದಲ ಹೆಣ್ಣುಮಕ್ಕಳ ಶಾಲೆಯಾಗಿದ್ದ ಎನ್ಟಿಎಂಎಸ್ ಶಾಲೆ ನೆಲಸಮಗೊಂಡಿದೆ. ಪೊಲೀಸ್ ಭದ್ರತೆಯಲ್ಲಿ ಸುಮಾರು 140 ವರ್ಷಗಳ ಹಳೆಯ ಶಾಲಾ ಕಟ್ಟಡ ತೆರವು ಕಾರ್ಯಾಚರಣೆ ನಡೆದಿದೆ. ರಾತ್ರೋರಾತ್ರಿ ಎನ್ಟಿಎಂಸ್ ಶಾಲೆ ಕಟ್ಟಡ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿದ್ದ ಈ ಶಾಲೆ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕಾಗಿ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರವಾಗಿತ್ತು.
ಇದರ ನಡುವೆ ಶಾಲೆಯ ಜಾಗ ನೀಡುವುದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಹೈಕೋರ್ಟ್ ಆದೇಶ ತಂದು ಜಾಗ ತೆರವುಗೊಳಿಸಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಜಾಗ ತೆರವು ಮಾಡಲಾಗಿದೆ. ವಿವೇಕಾನಂದರ 150ನೇ ಜಯಂತಿ ಹಿನ್ನೆಲೆ ವಿವೇಕಾನಂದರ ಸವಿ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಇನ್ನು ನೂರಾರು ಪೊಲೀಸರ ಸಮ್ಮುಖದಲ್ಲಿ ಶಾಲಾ ಕಟ್ಟಡ ತೆರವು ಕಾರ್ಯಾಚರಣೆ ನಡೆದಿದ್ದು ಭದ್ರತೆಗಾಗಿ 250ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದರು. 4 ಹಿಟಾಚಿ, 3 ಜೆಸಿಬಿಗಳಿಂದ ಕಟ್ಟಡ ತೆರವು ಕಾರ್ಯಾಚರಣೆ ನಡೆದಿದೆ. ಇನ್ನು ತೆರವು ಕಾರ್ಯಾಚರಣೆ ತಡೆಯಲು ಬಂದ ಎನ್ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.