ಮೈಸೂರು: ಜೆಎಸ್ಎಸ್ ಬಡಾವಣೆಯ ಎರಡನೇ ಹಂತದ ಶ್ರೀಮತಿ ಬಸಮ್ಮಣ್ಣಿ ಮತ್ತು ಶ್ರೀ ಸಿದ್ಧಲಿಂಗಸ್ವಾಮಿಯವರ ಸ್ವಗೃಹದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ 289ನೇ ಶಿವಾನುಭವ ದಾಸೋಹ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದಹುಲಿಯೂರು ದುರ್ಗದ ಶ್ರೀ ಸಿದ್ಧಗಂಗಾ ಮಠದ ನಿ.ಪ್ರ. ಶ್ರೀ ಸಿದ್ಧಲಿಂಗ ಶಿವಾನಂದ ಸ್ವಾಮಿಗಳು ಚಾಮರಾಜನಗರದ ಹರದನಹಳ್ಳಿಯ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರರು ಜನರಲ್ಲಿ ಧಾಮಿಕ ಜಾಗೃತಿಯನ್ನು ಮೂಡಿಸಿ, ನಾಡಿನೆಲ್ಲೆಡೆ ಸಂಚರಿಸಿ ಜನರ ದುಃಖ ದುಮ್ಮಾನಗಳನ್ನು ಪರಿಹರಿಸಿದರು. ಅವರು ಪಂಡಿತರೂ ಹೌದು. 701 ವಚನಗಳನ್ನು ರಚಿಸಿದ್ದಾರೆ. ಶಿವಯೋಗ ಸಂಪನ್ನರಾಗಿ ಸಮಾಜ ಸುಧಾರಕರಾಗಿದ್ದರೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಟಾಳು ಶ್ರೀ ಸೂರ್ಯಸಿಂಹಾಸನ ಮಠದ ಷ.ಬ್ರ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಶರಣರ ತತ್ವಗಳನ್ನು ತಿಳಿದು ಅವುಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಶರಣ ಸಾಹಿತ್ಯ ಪರಿಷತ್ ಸ್ಥಾಪಿಸಿ ಜನರಲ್ಲಿ ಶರಣಸಂಸ್ಕೃತಿಯನ್ನು ಪಸರಿಸಿದರು ಎಂದು ತಿಳಿಸಿದರು.
ರಾಮೇನಹಳ್ಳಿ ಶ್ರೀಗಳು ಮಾತನಾಡುತ್ತಾ ಶಿವಶರಣರ ಪುಣ್ಯಕ್ಷೇತ್ರಗಳನ್ನು ದರ್ಶನ ಮಾಡಿ, ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಕು. ಯಶಸ್ವಿನಿ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಶ್ರೀ ಸಿದ್ಧಲಿಂಗಸ್ವಾಮಿ ಸ್ವಾಗತಿಸಿದರು. ಸುನೀಲ್ಕುಮಾರ್ ವಂದದಿಸಿದರೆ, ರಶ್ಮಿ ನಿರೂಪಿಸಿದರು.