ಮೈಸೂರು: ಈಗಾಗಲೇ ತಂಬಾಕಿನ ಉತ್ಪನ್ನಗಳಾದ ಬೀಡಿ, ಸಿಗರೇಟ್, ನಶ್ಯ ಮೊದಲಾದವುಗಳನ್ನು ಬಳಸದಂತೆ ಅರಿವು ಮೂಡಿಸುವುದು ಒಂದೆಡೆಯಾಗಿದ್ದರೆ ಮತ್ತೊಂದೆಡೆ ತಂಬಾಕು ಬೆಳೆಯುವ ರೈತರಿಗೆ ಪರ್ಯಾಯ ಬೆಳೆ ಬೆಳೆಯುವ ವಾತಾವರಣವನ್ನು ನಿರ್ಮಿಸಿಕೊಡುವತ್ತ ಸರ್ಕಾರ ಗಮನಹರಿಸಬೇಕಾಗಿದೆ.
ಈಗಾಗಲೇ ತಂಬಾಕು ವಾಣಿಜ್ಯ ಬೆಳೆಯಾಗಿದ್ದು, ಈ ಬೆಳೆಯನ್ನು ಬೆಳೆದರೆ ಆರ್ಥಿಕವಾಗಿ ಹೆಚ್ಚಿನ ಆದಾಯ ಪಡೆಯಬಹುದು ಎಂಬುದು ರೈತರ ಬಯಕೆಯಾಗಿದೆ. ಹೀಗಾಗಿ ಬಂಡವಾಳ ಸುರಿದು ಬೆಳೆ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಬೆಳೆದು ಲಾಭ ಕಂಡವರು ಇದ್ದಾರೆ. ಜತೆಗೆ ನಷ್ಟ ಹೊಂದಿ ಆತ್ಮಹತ್ಯೆಗೆ ಶರಣಾದವರು ಕೂಡ ಇದ್ದಾರೆ.
ಇದೆಲ್ಲದರ ನಡುವೆ ಕಳೆದ ಕೆಲವು ವರ್ಷಗಳಿಂದ ತಂಬಾಕು ಕೃಷಿಯನ್ನು ನಿಷೇಧಿಸಬೇಕು ಎಂಬ ಕೂಗುಗಳು ಕೇಳಿ ಬರುತ್ತಿವೆ. ಆ ಹಿನ್ನಲೆಯಲ್ಲಿ ಕೆಲವರು ತಂಬಾಕು ಬೆಳೆಯುವ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ಪರ್ಯಾಯ ಬೆಳೆಯತ್ತ ಮುಖ ಮಾಡುತ್ತಿದ್ದಾರೆ. ಮತ್ತೆ ಕೆಲವರು ಅದಕ್ಕೆ ಬಂಡವಾಳ ಹಾಕಿ ಬೆಳೆ ಬೆಳೆಯುವುದು ಅಸಾಧ್ಯ ಎಂಬ ತೀರ್ಮಾನಕ್ಕೂ ಬಂದಿದ್ದಾರೆ. ಇದೆಲ್ಲದರ ನಡುವೆ ಬಹುತೇಕ ರೈತರು ನಿಧಾನವಾಗಿ ಪರ್ಯಾಯ ಬೆಳೆಯತ್ತ ಒಲವು ತೋರುತ್ತಿರುವುದು ಕಂಡು ಬರುತ್ತಿದೆ.
ಇವತ್ತಿನ ಪರಿಸ್ಥಿತಿಯಲ್ಲಿ ತಂಬಾಕು ಬೆಳೆಯುವುದು ಸುಲಭವಾಗಿಲ್ಲ. ಕೂಲಿ ಕಾರ್ಮಿಕರ ಸಮಸ್ಯೆ ಹಾಗೂ ಕೂಲಿ ದರ ಹೆಚ್ಚಳ, ರಾಸಾಯನಿಕ ಗೊಬ್ಬರಗಳ ಬೆಲೆ ಏರಿಕೆ, ತಂಬಾಕು ಸೊಪ್ಪು ಹದ ಮಾಡಲು ಸೌದೆ ಕೊರತೆ ಹೀಗೆ ಹತ್ತಾರು ಸಮಸ್ಯೆಗಳು ತಂಬಾಕು ಬೆಳೆಯುವ ರೈತರನ್ನು ಕಾಡುತ್ತಿದೆ. ಬಂಡವಾಳ ಸುರಿದು ಬೆಳೆ ತೆಗೆಯಬೇಕಾಗಿರುವುದರಿಂದ ರೈತರು ಬ್ಯಾಂಕ್ ಹಾಗೂ ಕೈ ಸಾಲಗಳನ್ನು ಮಾಡಿ ಕೃಷಿ ಮಾಡುತ್ತಿದ್ದಾರೆ.
ಒಂದು ವೇಳೆ ಅದೃಷ್ಟ ಚೆನ್ನಾಗಿದ್ದು ಹುಲುಸಾಗಿ ಬೆಳೆದು, ಹದ ಮಾಡಿದ ತಂಬಾಕಿಗೆ ಉತ್ತಮ ಬೆಲೆ ದೊರೆತರೆ ರೈತರ ಬದುಕು ಹಸನಾದಂತೆ. ಇಲ್ಲದೆ ಹೋದರೆ ಕಥೆ ಮುಗಿದಂತೆಯೇ. ಬಹಳಷ್ಟು ರೈತರು ತಂಬಾಕು ಬೆಳೆ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ತಂಬಾಕಿನ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಹೆಚ್ಚಿನ ರೈತರು ಬಂದಿದ್ದಾರೆ. ಅಂತಹ ರೈತರನ್ನು ಗುರುತಿಸಿ ಅವರಿಗೆ ಪರ್ಯಾಯ ಬೆಳೆಯನ್ನು ಬೆಳೆಯಲು ಸರ್ಕಾರ ಪ್ರೋತ್ಸಾಹ ನೀಡಬೇಕಾಗಿದೆ. ಇದು ಸಾಧ್ಯವಾಗಬೇಕಾದರೆ ರೈತರ ಜತೆಯಲ್ಲಿ ಕೃಷಿ ಇಲಾಖೆ ಕೈಜೋಡಿಸಬೇಕಾದ ಅಗತ್ಯತೆಯಿದೆ.