ಮೈಸೂರು : ಕರ್ನಾಟಕದ ಹಲವು ಜಿಲ್ಲೆಗಳಿಗೆ ಪೈಪ್ಲೈನ್ ಮೂಲಕ ಗ್ಯಾಸ್ ಸಂಪರ್ಕ ಒದಗಿಸುವ ಯೋಜನೆಗೆ ಅನುಮೋದನೆ ದೊರೆತಿದ್ದು, ಅದರಲ್ಲಿ ಮೈಸೂರು ಒಂದಾಗಿದೆ. ಆದರೆ ಈ ವಿಚಾರವೇ ಈಗ ಬಿಜೆಪಿಯ ಶಾಸಕ ಮತ್ತು ಸಂಸದರ ನಡುವಿನ ಅಸಮಾಧಾನಕ್ಕೆ ಕಾರಣವಾಗಿದೆ.
ಪೈಪ್ಲೈನ್ ಮೂಲಕ ಗ್ಯಾಸ್ ಸಂಪರ್ಕ ಒದಗಿಸುವ ಯೋಜನೆಗೆ ಶಾಸಕ ರಾಮದಾಸ್ ಅಡ್ಡಗಾಲಾಗಿದ್ದು ಯೋಜನೆ ವಿರುದ್ಧ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತಂತೆ ಸಂಸದ ಪ್ರತಾಪಸಿಂಹ ಶಾಸಕ ಎಸ್.ಎ.ರಾಮದಾಸ್ ಹೆಸರು ಪ್ರಸ್ತಾಪಿಸದೆ ಮಾತನಾಡಿ, ಘನತ್ಯಾಜ್ಯ ನಿರ್ವಹಣೆಗೆ ಅಡ್ಡಗಾಲು ಹಾಕಿದ್ದರಲ್ಲದೆ ಈಗ ಕೌನ್ಸಿಲ್ ಸಭೆಗೆ ಪಾಲ್ಗೊಳ್ಳದಂತೆ ತಡೆಯುವ ಕೆಲಸ ಮಾಡಿದ್ದಾರೆ. ಚಿಲ್ಲರೆ ರಾಜಕಾರಣ ಮಾಡಿದರೆ ನಾನೇನೂ ಕೇರ್ ಮಾಡಲ್ಲ. ಗುಜರಾತ್ನಲ್ಲಿ ಗ್ಯಾಸ್ ಸಂಪರ್ಕ ಯೋಜನೆ ಜಾರಿಗೆ ತಂದಿದ್ದ ಮೋದಿ ಪ್ರಧಾನಿಯಾದ ಮೇಲೆ ಇಡೀ ದೇಶಕ್ಕೆ ವಿಸ್ತರಿಸಲು ಮುಂದಾಗಿದ್ದಾರೆ.
ಕರ್ನಾಟಕದ ಹಲವು ಜಿಲ್ಲೆಗಳಿಗೆ ಪೈಪ್ಲೈನ್ ಮೂಲಕ ಗ್ಯಾಸ್ ಸಂಪರ್ಕ ಒದಗಿಸುವ ಯೋಜನೆಗೆ ಅನುಮೋದನೆ ನೀಡಿದ್ದು, ಅದರಲ್ಲಿ ಮೈಸೂರು ಒಂದಾಗಿದೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ದಶಪಥ ರಸ್ತೆ ಉದ್ಘಾಟನೆಗೆ ಆಗಮಿಸುವ ಮೋದಿ ಅವರಿಂದಲೇ ಗ್ಯಾಸ್ ಸಂಪರ್ಕ ಕಲ್ಪಿಸುವುದಕ್ಕೂ ಚಾಲನೆ ಕೊಡಿಸಬೇಕೆಂಬ ಆಸೆಯಿದೆ. ಅದಕ್ಕಾಗಿ, ನಗರಪಾಲಿಕೆಯಲ್ಲಿ ಪೈಪ್ಲೈನ್ ಕಾಮಗಾರಿಗೆ ಅನುಮೋದನೆ ಪಡೆಯಲು ವಿಚಾರ ಮಂಡಿಸಿದ್ದೆ. ಪೈಪ್ಲೈನ್ ಹಾಕುವಾಗ ಡ್ಯಾಮೇಜ್ ಆಗುವ ರಸ್ತೆ ದುರಸ್ಥಿಗೆ ಅನುದಾನ ಕೊಡಲಾಗುತ್ತದೆ. ನಿರ್ವಹಣೆಗೂ ಅವಕಾಶವಿದೆ. ಹೀಗಿದ್ದರೂ, ನಮ್ಮದೇ ಪಕ್ಷದ ಶಾಸಕರು ಕೋರಂ ಇಲ್ಲದಂತೆ ಮಾಡಲು ಸದಸ್ಯರನ್ನು ತಡೆಯುತ್ತಾರೆ. ಕಾಂಗ್ರೆಸ್ ಜತೆ ಕೈ ಜೋಡಿಸುತ್ತಾರೆ ಎಂದು ಕಿಡಿಕಾರಿದರು.
ವಿದ್ಯಾರಣ್ಯಪುರಂನಲ್ಲಿ ಬಿದ್ದಿರುವ ರಾಶಿ ರಾಶಿ ಘನತ್ಯಾಜ್ಯ ಖಾಲಿ ಮಾಡಿಸಲು ಮುಂದಾದರೆ ನನ್ನ ಕ್ಷೇತ್ರಕ್ಕೆ ಇವರ್ಯಾರು ಎನ್ನುತ್ತಾರೆ. ಗ್ಯಾಸ್ ಸಂಪರ್ಕದಿಂದ ರಸ್ತೆ ಹಾಳಾಗುತ್ತದೆ ಎಂದು ಪತ್ರ ಬರೆದಿರುವ ಇವರು ಯಾವ್ಯಾವ ರಸ್ತೆಗೆ ಡಾಂಬರು ಹಾಕಿಸಿದ್ದಾರೆ ನೋಡೋಣ. ಘನತ್ಯಾಜ್ಯ ಖಾಲಿ ಮಾಡಿಸಲು ಟೆಂಡರ್ ಪ್ರಕ್ರಿಯೆ ಶುರುವಾಗಿದೆ. ಗ್ಯಾಸ್ ಸಂಪರ್ಕ ಕೊಡಿಸುತ್ತೇನೆ. ನಗರದ ಜನರ ಹಿತದೃಷ್ಟಿಯಿಂದ ಕಂದಾಯ ಭೂಮಿಯಲ್ಲಿ ವಾಸ ಮಾಡುತ್ತಿರುವವರಿಗೆ ಬಿ-ಖಾತೆ ಮಾಡಿಕೊಡುವ ವಿಚಾರವನ್ನು ನಾನೇ ಪ್ರಸ್ತಾಪ ಮಾಡಿದ್ದೇನೆ. ಸರ್ಕಾರದ ಗಮನಕ್ಕೂ ತಂದಿದ್ದೇನೆ. ಜನರ ಹಿತಮುಖ್ಯವಾಗಿದ್ದರೆ ಕೌನ್ಸಿಲ್ ಸಭೆಯಲ್ಲಿ ಬಂದು ಚರ್ಚೆ ಮಾಡಬೇಕು. ಅದಕ್ಕೆ ತಕ್ಕಂತೆ ಚರ್ಚಿಸಲು ನಾನೂ ತಯಾರಿದ್ದೇನೆ ಎಂದು ಹರಿಹಾಯ್ದಿದ್ದಾರೆ.