ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಆರು ತಿಂಗಳನ್ನು ಪೂರೈಸುತ್ತಿರುವ ಬೆನ್ನಲ್ಲೇ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದು, ಸದ್ಯ ಒಂಬತ್ತು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಸಿಐಡಿ ವಿಭಾಗದ ಎಸ್ಪಿಯಾಗಿದ್ದ ರವಿ ಡಿ.ಚನ್ನಣ್ಣನವರ್ ಅವರನ್ನು ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದೆ.
ಇನ್ನು ಸಿಐಡಿ ವಿಭಾಗದ ಎಸ್ಪಿಯಾಗಿದ್ದ ಡಾ.ಭೀಮಾಶಂಕರ್ ಎಸ್.ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿಯಾಗಿದ್ದ ಅಬ್ದುಲ್ ಅಹದ್ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸುರಕ್ಷತೆ ಹಾಗೂ ವಿಚಕ್ಷಣಾ ವಿಭಾಗದ ನಿರ್ದೇಶಕರನ್ನಾಗಿ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಟಿ.ಶ್ರೀಧರ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬಂದೀಖಾನೆ ಎಸ್ಪಿಯಾಗಿದ್ದ ಟಿ.ಪಿ.ಶಿವಕುಮಾರ್ ಅವರನ್ನು ಚಾಮರಾಜನಗರ ಜಿಲ್ಲೆಯ ಎಸ್ಪಿಯಾಗಿ, ಚಾಮರಾಜನಗರ ಜಿಲ್ಲೆಯ ಎಸ್ಪಿಯಾಗಿದ್ದ ದಿವ್ಯಾ ಸಾರಾ ಥಾಮಸ್ ಅವರನ್ನು ಮೈಸೂರಿನ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕಿಯಾಗಿ, ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ದೆಕ್ಕಾ ಕಿಶೋರ್ ಬಾಬು ಅವರನ್ನು ಬೀದರ್ ಜಿಲ್ಲಾ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿಯಾಗಿದ್ದ ಅರುಣಾಂಶು ಗಿರಿ ಅವರನ್ನು ಕೊಪ್ಪಳ ಜಿಲ್ಲಾ ಎಸ್ಪಿಯಾಗಿ, ಬೀದರ್ ಜಿಲ್ಲಾ ಎಸಿಯಾಗಿದ್ದ ಡಿ.ಎಲ್.ನಾಗೇಶ್ ಅವರನ್ನು ಸಿಐಡಿ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.